ರಾಯಚೂರು: ಆಂಧ್ರಪ್ರದೇಶದ ತಿರುಪತಿಯಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಯ ನೀರಿನಲ್ಲಿ ಕ್ರೂಸರ್ ವಾಹನ ಮುಳುಗಿ ಜಿಲ್ಲೆಯ ಲಿಂಗಸುಗೂರು ನಿವಾಸಿ ಸಂಧ್ಯಾ (30) ಮೃತಪಟ್ಟಿದ್ದಾರೆ.
‘ಕುಟುಂಬ ಸದಸ್ಯರೊಂದಿಗೆ ಸಂಧ್ಯಾ ಅವರು ಕ್ರೂಸರ್ ವಾಹನದಲ್ಲಿ ತಿರುಪತಿಗೆ ತೆರಳಿದ್ದರು. ಅಲ್ಲಿ ಬಾಲಾಜಿ ಕಾಲೊನಿಯ ರೈಲ್ವೆ ಕೆಳ ಸೇತುವೆ ಬಳಿ ವಾಹನ ಇಳಿಜಾರಿನಲ್ಲಿ ಸಿಲುಕಿದೆ. ತಕ್ಷಣವೇ ಚಾಲಕ ಹೊರಗೆ ಜಿಗಿದು ಸಂಧ್ಯಾ ಅವರ ಅತ್ತೆಯ ಸೀರೆ ಸಹಾಯದಿಂದ ಕುಟುಂಬ ಸದಸ್ಯರನ್ನು ರಕ್ಷಿಸಿದ್ದಾರೆ. ವಾಹನದಲ್ಲಿ ಏಳು ಜನರಿದ್ದರು. ವಾಹನದಲ್ಲಿದ್ದವರನ್ನು ರಕ್ಷಿಸುವ ಸಂದರ್ಭದಲ್ಲಿ ಸಂಧ್ಯಾ ಅವರು ಎಚ್ಚರ ತಪ್ಪಿದ್ದಾರೆ. ಅಷ್ಟರಲ್ಲಿ ವಾಹನದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ. ಅದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮುದಗಲ್ ಮೂಲದ ಸಂಧ್ಯಾ ಅವರು ಕಳೆದ ವರ್ಷ ಲಿಂಗಸುಗೂರಿನ ಹರೀಶ್ ಅವರನ್ನು ಮದುವೆಯಾಗಿದ್ದರು. ಹರೀಶ್ ದುಬೈನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ವಿವಾಹಕ್ಕೆ ಸ್ವಗ್ರಾಮಕ್ಕೆ ಬಂದು, ಕಾರ್ಯನಿಮಿತ್ತ ಇಲ್ಲೇ ಉಳಿದಿದ್ದರು. ಲಿಂಗಸುಗೂರಿನಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು.