ರಾಯಚೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಮಂಗಳವಾರ ಧರಣಿ ನಡೆಸಲಾಯಿತು.
ಕಳೆದ ಡಿಸೆಂಬರ್ನಲ್ಲಿ ನಡೆಸಿದ ಹೋರಾಟದಲ್ಲಿ ಸರ್ಕಾರದ ಉಪಕಾರ್ಯದರ್ಶಿ ಅವರು ಜಿಲ್ಲಾ ಪಂಚಾಯಿತಿ ಹಂತದ ಬೇಡಿಕೆಗಳನ್ನು ತಿಂಗಳೊಳಗೆ ಈಡೇರಿಸಬೇಕೆಂದು ಸೂಚಿಸಿದ್ದರು. ಇಎಫ್ಎಮ್ಎಸ್ ಮೂಲಕ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನ ನೀಡುವುದನ್ನು ಹಲವು ಗ್ರಾಮ ಪಂಚಾಯಿತಿಗಳಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.
ಕೂಡಲೇ ಪಿಡಿಓಗಳಿಗೆ ಗ್ರಾಮ ಪಂಚಾಯಿತಿ ನೌಕರರ ಬಾಕಿ ಸಿಬ್ಬಂದಿಗೆ ಇಎಫ್ಎಮ್ಎಸ್ ಸೇರಿಸಲು ಸೂಚನೆ ನೀಡಬೇಕು. 2019 ರ ಜುಲೈ ಸರ್ಕಾರದ ಸುತ್ತೋಲೆಯಂತೆ ಅನುಮೋದನೆಗೆ ಬಾಕಿಯಿರುವ ಅರ್ಹ ನೌಕರರ ಪ್ರಸ್ತಾವನೆ ತರಿಸಿ ಅನುಮೋದನೆ ನೀಡಬೇಕು. 14ನೇ ಹಣಕಾಸು ಯೋಜನೆಯಡಿ ಶೇ 10 ವೇತನ ನೀಡಬೇಕು. 10 ವರ್ಷ ಸೇವೆ ಸಲ್ಲಿಸಿದ ಕರವಸೂಲಿಗಾರರ 2020 ಜನವರಿಯ ಜೇಷ್ಠತಾ ಪಟ್ಟಿ ತಯಾರಿಸಬೇಕು. ಸೇವೆಯಿಂದ ನಿವೃತ್ತಿ ಹೊಂದಿದ ನೌಕರರಿಗೆ 2008ರ ಅದೇಶದಂತೆ 15 ತಿಂಗಳ ಉಪದಾನ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಕೆ.ನಾರಾಯಣ, ತಾಲ್ಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ ಮನ್ಸಲಾಪೂರ, ಹನುಮಂತ ಬನ್ನಿಗೋಳ, ಶರಣಬಸವ, ಅಶೋಕ ದೆವಸುಗೂರು, ಹನುಮಂತರೆಡ್ಡಿ ಮಟಮಾರಿ, ಶ್ರೀರಾಮುಲು, ಆರ್.ಬಸವರಾಜ, ರಂಜಾನ್ ಸಾಬ್, ಸಾಬಣ್ಣ, ರಂಗಪ್ಪ ಇದ್ದರು.