ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಧಿಕ ಮಳೆಯಿಂದ ಹೆಚ್ಚುತ್ತಿವೆ ಅವಘಡ!

ರಾಯಚೂರು ಜಿಲ್ಲೆಯಲ್ಲಿ ಮತ್ತೆ ಸುರಿದ 24 ಎಂಎಂ ಮಳೆ
Last Updated 11 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಮುಂಗಾರು ಹಂಗಾಮು ಆರಂಭದಿಂದ ಸೆಪ್ಟೆಂಬರ್‌ ಅಂತ್ಯದವರೆಗೂ ಬೆನ್ನಟ್ಟಿದ ಮಳೆಯಿಂದ ಕಂಗೆಟ್ಟಿರುವ ರೈತರು, ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಅಕ್ಟೋಬರ್‌ನಲ್ಲಿ ಮಳೆ ಸುರಿಯುತ್ತಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.

ಮುಂಗಾರಿನ ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿ ಜಮೀನು ಖಾಲಿ ಮಾಡಿಕೊಂಡಿರುವ ರೈತರು, ಹಿಂಗಾರು ಬಿತ್ತನೆ ಮಾಡುವುದಕ್ಕೆ ಮಳೆ ಅನುಕೂಲ ಮಾಡುತ್ತಿದೆ. ಆದರೆ, ಈಗಾಗಲೇ ಕೆರೆ, ಕುಂಟೆಗಳು, ಭಾವಿಗಳು, ಹಳ್ಳಗಳು ಭರ್ತಿಯಾಗಿವೆ. ಮಳೆ ನಿರೀಕ್ಷೆ ಇಲ್ಲ. ಬಹುತೇಕ ಜಮೀನುಗಳಲ್ಲಿ ಹಸಿರು ಸಿರಿ ಕಂಗೊಳಿಸುತ್ತಿದೆ. ಆದರೆ, ಫಲ ಕೊಡುವ ಸಮೃದ್ಧತೆ ಹಾಳಾಗಿದೆ. ಅಳಿದುಳಿದ ಫಲವಾದರೂ ಸಿಗಬಹುದು ಎನ್ನುವ ನಿರೀಕ್ಷೆಯನ್ನೂ ಮಳೆ ಹಾಳು ಮಾಡುತ್ತಿದೆ.

ಅಧಿಕ ತೇವಾಂಶದಿಂದ ಈಗಾಗಲೇ ತೊಗರಿ, ಭತ್ತ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಗಳಿಗೆ ರೋಗ ಬಾಧೆಗಳು ಆರಂಭವಾಗಿವೆ. ರೋಗಬಾಧೆ ನಿಯಂತ್ರಿಸುವ ಹರಸಾಹಸದಲ್ಲಿ ರೈತರು ತೊಡಗಿದ್ದಾರೆ. ಮತ್ತೆ ಸುರಿಯುತ್ತಿರುವ ಮಳೆಯಿಂದ ಹಾನಿ ಇನ್ನೂ ಹೆಚ್ಚಾಗುವ ಭೀತಿ ರೈತರನ್ನು ಕಾಡುತ್ತಿದೆ. ಪ್ರತಿವರ್ಷ ಅಕ್ಟೋಬರ್‌ ಆರಂಭದಿಂದ ತೊಗರಿ, ಹತ್ತಿ ಕೊಯ್ಲು ಆರಂಭವಾಗುತ್ತಿತ್ತು. ಈ ವರ್ಷ ವ್ಯತಿರೀಕ್ತ ಪರಿಸ್ಥಿತಿ ಇದೆ.

ಐದು ಪಟ್ಟು ಹೆಚ್ಚು ಮಳೆ: ಜಿಲ್ಲೆಯ ಕೆಲವೆಡೆ ಶನಿವಾರ ರಾತ್ರಿಯಿಡೀ ಮಳೆಯಾಗಿದ್ದು, ಮಾಪಕದಲ್ಲಿ ಸರಾಸರಿ 24 ಮಿಲಿಮೀಟರ್‌ ದಾಖಲಾಗಿದೆ.

ದೇವದುರ್ಗ ತಾಲ್ಲೂಕಿನಲ್ಲಿ 30, ಲಿಂಗಸುಗೂರು ತಾಲ್ಲೂಕಿನಲ್ಲಿ 32, ಮಾನ್ವಿ ತಾಲ್ಲೂಕಿನಲ್ಲಿ 19, ರಾಯಚೂರು ತಾಲ್ಲೂಕಿನಲ್ಲಿ 10, ಸಿಂಧನೂರು ತಾಲ್ಲೂಕಿನಲ್ಲಿ 27, ಮಸ್ಕಿ ತಾಲ್ಲೂಕಿನಲ್ಲಿ 30 ಹಾಗೂ ಸಿರವಾರ ತಾಲ್ಲೂಕಿನಲ್ಲಿ 16 ಮಿಲಿಮೀಟರ್‌ ಮಳೆ ಸುರಿದಿದೆ. ವಾಡಿಕೆ ಮಳೆಗಿಂತಲೂ ಐದು ಪಟ್ಟು ಹೆಚ್ಚು ಮಳೆ ಬಿದ್ದಿದೆ.

ಮಸ್ಕಿ ತಾಲ್ಲೂಕಿನ ಗುಂಜಳ್ಳಿಯಲ್ಲಿ 64 ಮಿಲಿಮೀಟರ್‌ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸುರಿದ ಭಾರಿ ಮಳೆಯಿಂದ ಮಸ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೊರಹರಿವು ಹೆಚ್ಚಿಸಲಾಗಿದೆ.

ದೇವದುರ್ಗ ತಾಲ್ಲೂಕಿನ ಅರಕೇರಿ ಹೋಬಳಿಯಲ್ಲಿ ಅತಿಹೆಚ್ಚು 39 ಮಿಲಿಮೀಟರ್‌ ಮಳೆ, ಲಿಂಗಸುಗೂರು ತಾಲ್ಲೂಕಿನ ಮುದಗಲ್‌ ಹೋಬಳಿಯಲ್ಲಿ 39 ಮಿಲಿಮೀಟರ್‌ ಮಳೆ, ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್‌ ಹೋಬಳಿಯಲ್ಲಿ 31 ಮಿಲಿಮೀಟರ್‌ ಮಳೆ, ರಾಯಚೂರು ತಾಲ್ಲೂಕಿನ ಕಲ್ಮಲಾ ಹೋಬಳಿಯಲ್ಲಿ 18 ಮಿಲಿಮೀಟರ್‌ ಮಳೆ, ಸಿಂಧನೂರು ತಾಲ್ಲೂಕಿನ ಹಡಗನಾಳ ಹೋಬಳಿಯಲ್ಲಿ 35 ಮಿಲಿಮೀಟರ್‌ ಮಳೆ, ಮಸ್ಕಿ ತಾಲ್ಲೂಕಿನ ಗುಂಜಳ್ಳಿಯಲ್ಲಿ ದಾಖಲೆ 64 ಮಿಲಿಮೀಟರ್‌ ಮಳೆ ಹಾಗೂ ಸಿರವಾರ ತಾಲ್ಲೂಕಿನ ಕವಿತಾಳ ಹೋಬಳಿಯಲ್ಲಿ 20 ಮಿಲಿಮೀಟರ್‌ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT