ಮಸ್ಕಿ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತು.
ಸಂಜೆ 5 ಗಂಟೆಯಿಂದ ಆರಂಭವಾದ ಮಳೆ ಇಡೀ ರಾತ್ರಿ ಸುರಿಯಿತು. ತಾಲ್ಲೂಕಿನಾದ್ಯಂತ ಬೆಳೆದ ಭತ್ತ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿವೆ. ಹೊಲ ಗದ್ದೆಗಳು ಕರೆಯಂತಾಗಿದ್ದು ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯಕ್ಕೆ ಹೆಚ್ಚಿನ ಒಳ ಹರಿವು ಇದ್ದು ಯಾವುದೇ ಕ್ಷಣದಲ್ಲಿ ನೀರು ಹೊರ ಬಿಡುವ ಸಾದ್ಯತೆ ಇದೆ.
ಮಳೆಯಿಂದಾಗಿ ಚಿಲ್ಕರಾಗಿ ಆನಂದಗಲ್ ಗ್ರಾಮದ ಸೇತುವೆ ಜಲವೃತಗೊಂಡಿದ್ದು ಕೆಲ ಗಂಟೆಗಳ ಕಾಲ ಈ ಮಾರ್ಗದ ಹತ್ತು ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡ ಕಾರಣ ಕಲ ಗಂಟೆಗಳ ಕಾಲ ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದರು.
ಬಳಗಾನೂರು, ಹಾಲಾಪೂರ, ದುರ್ಗಾಕ್ಯಾಂಪ್, ಪಾಂಡುರಂಗ ಕ್ಯಾಂಪ್ ಸೇರಿದಂತೆ ಅನೇಕ ಗ್ರಾಮಗಳ ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಆರ್. ಬಸನಗೌಡ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ನೊಡೆಲ್ ಅಧಿಕಾರಿ ನೇಮಕ: ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದ್ದರಿಂದ ತಾಲ್ಲೂಕಿನಾದ್ಯಂಯ ಹೈ ಆಲಾರ್ಟ್ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಕವಿತಾ ಆರ್. ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೊಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಮಳೆಯಿಂದಾದ ಹಾನಿ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು ಮೂರು ದಿನನ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.
ಹಳ್ಳದ ದಂಡೆಯ ಗ್ರಾಮಸ್ಥರಿಗೆ ಎಚ್ಚರಿಕೆ
ಮಸ್ಕಿ: ಮಸ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದ್ದು ಜಲಾಶಯ ವ್ಯಾಪ್ತಿಯ ಹಳ್ಳದ ದಂಡೆಯ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಯೋಜನೆ ಎಂಜಿನಿಯರ್ ದಾವುದ್ ತಿಳಿಸಿದ್ದಾರೆ.
ಈಗಾಗಲೇ ಜಲಾಶಯ ಭರ್ತಿಯಾಗಿದೆ. ನೀರಿನ ಒಳ ಹರಿವು ಹೆಚ್ಚುತ್ತಿದ್ದರಿಂದ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದ್ದರಿಂದ ಹಳ್ಳದಲ್ಲಿ ಇಳಿಯಬಾರದು ಎಂದು ಮನವಿ ಮಾಡಿದ್ದಾರೆ.