ರಾಯಚೂರು: ಮಹಿಳೆಯರು ಕೇವಲ ನಾಲ್ಕು ಗೊಡೆಗಳ ಮಧ್ಯೆ ಇರದೇ ಸ್ವತಂತ್ರವಾಗಿ ಕೆಲಸ ಮಾಡಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು. ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಮಾವೇಶ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಮನೆಯಲ್ಲಿಯೇ ಕುಳಿತುಕೊಳ್ಳದೆ, ಪುರುಷರ ಜೊತೆಗೆ ಸಮಾಜದಲ್ಲಿ ಕೆಲಸ ಮಾಡಲು ಮುಂದೆ ಬರಬೇಕು. ಸಮಾಜದಲ್ಲಿ ಆಗು ಹೋಗುವುದಗಳ ಬಗ್ಗೆ ಅರಿತುಕೊಳ್ಳಬೇಕು. ಹೆಣ್ಣು ಸಂಸಾರದ ಕಣ್ಣು ಎಂಬಂತೆ ಸಮಾಜದಲ್ಲಿಯೂ ಮಹಿಳೆ ಒಂದು ಕಣ್ಣಾಗಿ ಕೆಲಸ ಮಾಡಬೇಕು ಎಂದರು.
ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಸಂವಿಧಾನದಿಂದ ಮಹಿಳೆಯರಿಗೆ ಶೇ 50 ರಷ್ಟುರಾಜಕೀಯ ಮೀಸಲಾತಿ ಕಲ್ಪಿಸಿದೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ ಮಾತನಾಡಿ, ಶಿವಾಜಿಯ ಮಹಾರಾಜ ತನ್ನ ತಾಯಿಗಾಗಿ ಇಡೀ ಸಾಮ್ರಾಜ್ಯವನ್ನು ಕಟ್ಟಿದ. ಅನೇಕ ಮಹಾರಾಜರು ತಮ್ಮ ತಾಯಿಯರ ನೆನಪಿಗಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಇತಿಹಾಸವನ್ನು ಅವಲೋಕಿಸಿದರೆ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ , ಒನಕೆ ಒಬವ್ವ , ಝಾನ್ಸಿ ರಾಣಿ ಲಕ್ಷ್ಮೀಬಾಯಿ , ರಾಣಿ ಅಬ್ಬಕ್ಕ ಹೀಗೆ ಅನೇಕ ಮಹಿಳೆಯರು ತಮ್ಮ ಶೌರ್ಯದಿಂದ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಕಚೇರಿ ಹಾಗೂ ಕುಟುಂಬ ಎರಡೂ ನಿರ್ವಹಣೆ ಕಷ್ಟ. ಇದು ಮಹಿಳೆಯರು ಮಾತ್ರ ಸೂಕ್ತವಾಗಿ ನಿಭಾಯಿಸುತ್ತಾರೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಜಯಶ್ರೀ ಚೆನ್ನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಮದ್ಯಪಾನ ನಿಷೇಧ ಆಂದೋಲನ ಕರ್ನಾಟಕದ ಸಂಚಾಲಕಿ ಮೋಕ್ಷಮ್ಮ, ಶ್ರೀದೇವಿ, ಶರಣಮ್ಮ ಕಾಮಿರೆಡ್ಡಿ, ಶೇಷಮ್ಮ, ಡಾ.ವಿಜಯ, ಎಚ್.ಪದ್ಮಾ , ಈರಮ್ಮ , ರಾಮಕೃಷ್ಣ , ಮಂಜುನಾಥ ಇದ್ದರು.