ರಾಯಚೂರು: ನಗರದ ಪೂರ್ಣಿಮಾ ಶಿಕ್ಷಣ ಸಂಸ್ಥೆಯ ಭವ್ಯ ಸಭಾಂಗಣದಲ್ಲಿ ಡಿಸೆಂಬರ್ 20 ರಂದು ಶ್ರೀ ಕೇದಾರ ಮಠದ ಜಗದ್ಗುರು ಭೀಮಾ ಶಂಕರಲಿಂಗ ಶಿವಾಚಾರ್ಯರಿಂದ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮ ಜರುಗುವುದು ಎಂದು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಇಷ್ಟಲಿಂಗ ಮಹಾಪೂಜಾ ನಡೆಯುವುದು. ಪೂಜಾ ಕಾರ್ಯಕ್ರಮದ ನಂತರ ಧರ್ಮಸಭೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೇದಾರ ಜಗದ್ಗುರುಗಳ ದರ್ಶನ ಪಡೆಯುವಂತೆ ತಿಳಿಸಿದರು.
ಪೂರ್ಣಿಮಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಲ್.ಕೇಶವರೆಡ್ಡಿ ಮಾತನಾಡಿ, ಮಹಾಪೂಜೆ ದಿನದಂದು ಮಧ್ಯಾಹ್ನ 2 ಗಂಟೆಗೆ ಅನುಷಾ ಪಾಟೀಲ ಬಡಾವಣೆಯಲ್ಲಿ ಸ್ವಾಮೀಜಿಗಳಿಂದ ಪೂರ್ಣಿಮಾ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಸಂಜೆ 4 ಗಂಟೆಗೆ ಪೂರ್ಣಿಮಾ ಚಿತ್ರ ಮಂದಿರದ ಕಾಂಪ್ಲೆಕ್ಸ್ನಲ್ಲಿ ನೂತನ ಪೂರ್ಣಿಮಾ ಪತ್ತಿನ ಸೌಹಾರ್ದ ನಿಯಮಿತ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ನವಲಕಲ್ ಗುರು ಸೋಮೇಶ್ವರ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಪೂರ್ಣಿಮಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಖಾ ಕೇಶವರೆಡ್ಡಿ, ಸಿದ್ದಯ್ಯ ಸ್ವಾಮಿ, ವಸಂತಕುಮಾರ್ ಪಾಟೀಲ್, ಶಂಕರಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.