ಸಿಂಧನೂರು (ರಾಯಚೂರು): ‘ಬಿಜೆಪಿ ಸರ್ಕಾರ ರಾಜ್ಯದಲ್ಲಿ ಲಾಕ್ಡೌನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಕೋವಿಡ್ ಆರಂಭದಿಂದಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಮುಂದೆಯೂ ಸರ್ಕಾರ ಕೋವಿಡ್ ಸಮರ್ಪಕ ನಿರ್ವಹಣೆ ಮಾಡುವುದಿಲ್ಲ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಬುಧವಾರ ಸಿಂಧನೂರಿಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಬಿಜೆಪಿಯವರು ಅಧಿಕಾರ ತ್ಯಾಗ ಮಾಡಿ ಬಿಟ್ಟುಹೋಗಲಿ. ಕೋವಿಡ್ ಸಂಕಷ್ಟದಲ್ಲೂ ಆಸ್ಪತ್ರೆ, ಪಿಪಿಇ ಕಿಟ್ , ಔಷಧಿಯಲ್ಲಿಯೂ ದುಡ್ಡು ಹೊಡೆಯುವುದಕ್ಕೆ ಯೋಚಿಸುತ್ತಾರೆ. ಇವರಿಂದ ಅಧಿಕಾರ ನಡೆಸುವುದಕ್ಕೆ ಆಗುವುದಿಲ್ಲ. ಕೋವಿಡ್ ನಿರ್ವಹಣೆ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದರು.
‘ಕೋವಿಡ್ ಲಸಿಕೆಯನ್ನು ವಿದೇಶಗಳಿಗೆ ಹಂಚುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಂತರರಾಷ್ಟ್ರೀಯ ನಾಯಕರಾಗಲು ಹೊರಟಿದ್ದಾರೆ. ಮೊದಲು ನಮ್ಮ ದೇಶದ ಜನರನ್ನು ಉಳಿಸಲು ಆದ್ಯತೆ ನೀಡಬೇಕು’ ಎಂದು ಹೇಳಿದರು.