ರಾಯಚೂರು: ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಕೆಎಎಸ್ ಅಧಿಕಾರಿ ಖ್ವಾಜಾ ಬಂದೇನವಾಜ್ (53) ಅವರು ಕೋವಿಡ್ನಿಂದ ಚೇತರಿಸಿಕೊಳ್ಳಲಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಪತ್ನಿ ಊರು ಕಲಬುರ್ಗಿಗೆ ಹೋಗಿದ್ದ ವೇಳೆ ಎರಡು ವಾರಗಳ ಹಿಂದೆ ಅವರಿಗೆ ಕೋವಿಡ್ ದೃಢವಾಗಿತ್ತು. ಮನೆಯಲ್ಲೇ ಒಂದು ವಾರ ಕ್ವಾರಂಟೈನ್ನಲ್ಲಿದ್ದಾಗ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟ ಸಮಸ್ಯೆ ತೀವ್ರವಾದಾಗ ಹೈ ಫ್ಲೋ ಆಕ್ಸಿಜನ್ ಚಿಕಿತ್ಸೆ ನೀಡುವುದಕ್ಕಾಗಿ ಸೋಮವಾರ ಬೆಳಿಗ್ಗೆ ರಿಮ್ಸ್ಗೆ ಸ್ಥಳಾಂತರ ಮಾಡಲಾಗಿತ್ತು.
ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲೂ ಅವರು ಸೇವೆ ಸಲ್ಲಿಸಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬರು ಪುತ್ರಿ ಇದ್ದಾರೆ.
ಸ್ವಂತ ಊರು ದೇವದುರ್ಗ ಪಟ್ಟಣದಲ್ಲಿ ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.