ಲಿಂಗಸುಗೂರು: ‘ತಾವು ಜಿಲ್ಲಾಧಿಕಾರಿಯಾಗಿ ಮೂರು ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ಕರ್ಮಭೂಮಿ ಇದಾಗಿದೆ. ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾಗಿದ್ದು ರಾಯಚೂರು ಕರ್ಮಭೂಮಿಯಿಂದ ರಾಜಕೀಯ ಸೇವೆ ಸಲ್ಲಿಸಲು ಬಂದಿರುವೆ. ಮತದಾರ ಬಂಧುಗಳು ಅವಕಾಶ ನೀಡಬೇಕು’ ಎಂದು ಅಭ್ಯರ್ಥಿ ಜಿ. ಕುಮಾರ ನಾಯಕ ಮನವಿ ಮಾಡಿದರು.
ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಯಚೂರು ಮತ್ತು ಯಾದಗಿರಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳು ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಕೃಷ್ಣೆ ತುಂಗೆ, ಭೀಮಾ ನದಿಗಳು, ಚಿನ್ನದ ಗಣಿ, ವಿದ್ಯುತ್ ಉತ್ಪಾದನ ಸ್ಥಾವರೊಳಗೊಂಡಿದ್ದರು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕೀಳಲಾಗಿಲ್ಲ. ತಾವು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದಲ್ಲಿ ನಿಮ್ಮೆಲ್ಲರ ಧ್ವನಿಯಾಗಿ ಸೇವೆ ಸಲ್ಲಿಸಲು ಸಿದ್ಧನಿರುವೆ’ ಎಂದು ಹೇಳಿದರು
ಸಮಾವೇಶ ಉದ್ಘಾಟಿಸಿದ ಸಚಿವ ಎನ್.ಎಸ್ ಭೋಸರಾಜ ಮಾತನಾಡಿ, ‘ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಜಿಲ್ಲಾಧಿಕಾರಿಯಾಗಿ, ವಿವಿಧ ಇಲಾಖೆಗಳಲ್ಲಿರುವಾಗ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾಗಿ ಅಭ್ಯರ್ಥಿ ಕುಮಾರನಾಯಕ ಮಾಹಿತಿ ಹೊಂದಿದ್ದಾರೆ. ಸಮರ್ಥ ಅಭ್ಯರ್ಥಿ ಬೆಂಬಲಿಸುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಬೇಕು’ ಎಂದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ. ಶಾಂತಪ್ಪ, ಡಿ.ಜಿಇ ಗುರಿಕಾರ ಮಾತನಾಡಿ, ‘ವಿಧಾನಸಭೆ ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿರುವವರ ಬಗ್ಗೆ ಯಾರು ಚರ್ಚಿಸಬೇಡಿ. ದೇವರು ಅವರಿಗೆ ಶಿಕ್ಷಿಸಲಿದ್ದಾರೆ. ಸರ್ಕಾರಿ ಸೇವೆಯಲ್ಲಿ ಉತ್ತಮ ಆಡಳಿತ ನೀಡಿರುವ ಸಮರ್ಥ ಅಭ್ಯರ್ಥಿ ನಮಗೆ ದೊರೆತಿರುವುದು ಆನೆ ಬಲ ಬಂದಂತಾಗಿದೆ. ಅಭ್ಯರ್ಥಿಗೆ ಆಶೀರ್ವದಿಸಿ’ ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ ಲಿಂಗಸುಗೂರು, ಶಿವಶಂಕರಗೌಡ ಪಾಟೀಲ ಮುದಗಲ್ಲ. ಮುಖಂಡರಾದ ಅಮರಗುಂಡಪ್ಪ ಮೇಟಿ, ಟಿ.ಆರ್ ನಾಯ್ಕ, ದಾವೂದ್, ರಾಜಾಶ್ರೀನಿವಾಸ ನಾಯಕ, ಕಿರಿಲಿಂಗಪ್ಪ ಕವಿತಾಳ, ಅಮ್ಜದ್ ಹಟ್ಟಿ, ಅಹ್ಮದಬಾಬಾ, ಪ್ರಭುಸ್ವಾಮಿ ಅತ್ನೂರು, ಗುಂಡಪ್ಪ ಸಾಹುಕಾರ, ಕಂಠೆಪ್ಪಗೌಡ, ಶಿವಾನಂದ ಐದನಾಳ, ಜಯಂತರಾವ್ ಪತಂಗೆ, ವೇಣುಗೋಪಾಲ.
ಖಾದರಪಾಷ, ಮಹಾದೇವಯ್ಯ ಗೌಡೂರು, ಎಸ್.ಆರ್ ರಸೂಲ, ಎಂ.ಡಿ ರಫಿ, ಶಿವಮೂರ್ತಿ, ವಿಜಯಲಕ್ಷ್ಮಿ ದೇಸಾಯಿ, ಮಂಜುಳಾ ಬಡಿಗೇರ, ಶ್ವೇತಾ ಲಾಲಗುಂದಿ, ಲಿಂಗರಾಜ ಹಟ್ಟಿ, ಶಿವಣ್ಣ ನಾಯಕ, ಶಾಂತಪ್ಪ ಆನ್ವರಿ, ಸಂಜೀವಕುಮಾರ, ಗ್ಯಾನಪ್ಪ ಕಟ್ಟಿಮನಿ, ಬಾಬುರೆಡ್ಡಿ ಮುನ್ನೂರು, ವಾಹಿದ್ ಖಾದ್ರಿ, ಕುಪ್ಪಣ್ಣ ಕೊಡ್ಲಿ ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಅಮರೇಶ್ವರ ದೇವರ ದರ್ಶನ: ತಾಲ್ಲೂಕಿನ ಸಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನಕ್ಕೆ ತೆರಳಿದ್ದ ರಾಯಚೂರು ಲೋಕಸಭಾ ಅಭ್ಯರ್ಥಿ ಜಿ. ಕಮಾರನಾಯಕ ಸಚಿವ ಎನ್.ಎಸ್ ಬೋಸರಾಜು, ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಸಾರಥ್ಯದಲ್ಲಿ ಅಮರೇಶ್ವರ ದೇವರಿಗೆ ಪೂಜಾ ಕೈಂಕರ್ಯ ಸಲ್ಲಿಸಿ ದರ್ಶನ ಆಶೀರ್ವಾದ ಪಡೆದರು. ಇದಕ್ಕೂ ಮುಂಚೆ ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಪುಷ್ಪಗುಚ್ಛ ನೀಡಿ ಅಭ್ಯರ್ಥಿ, ಸಚಿವರನ್ನು ಸ್ವಾಗತಿಸಿಕೊಂಡರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಬಿಜೆಪಿ ಹಿರಿಯ ಮುಖಂಡ ಮುದಕಪ್ಪ ನೀರಲಕೇರಿ, ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಹಿರಿಯ ಮುಖಂಡ ಶರಣಪ್ಪ ಮೇಟಿ ಸೇರಿದಂತೆ ಲಿಂಸುಗೂರು ಕ್ಷೇತ್ರದ ಬಿಜೆಪಿಡ, ಜೆಡಿಎಸ್ ಇತರೆ ಪಕ್ಷಗಳನ್ನು ತೊರೆದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಚಿವ ಎನ್.ಎಸ್. ಬೋಸರಾಜು ಪಕ್ಷದ ಧ್ವಜ ಹಾಗೂ ಶಾಲು ಹೊದಿಸಿ ಸ್ವಾಗತಿಸಿಕೊಂಡರು.
ಪ್ರಮುಖ ವ್ಯಕ್ತಿಗಳ ಗೈರು: ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಎ.ವಸಂತಕುಮಾರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಸೇರಿದಂತೆ ಗಣ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸಚಿವ ಎನ್.ಎಸ್. ಬೋಸರಾಜು ಅನುಪಸ್ಥಿತಿಯ ಗಣ್ಯರು ತಮಗೆ ಹೇಳಿಯೆ ಅನ್ಯ ಕೆಲಸಗಳಿಗೆ ತೆರಳಿದ್ದಾರೆ ಎಂದು ತೆರೆ ಎಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.