ಮಂತ್ರಾಲಯ: ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ಕೊನೆಯ ದಿನ ಬುಧವಾರ, ಮಹಾರಥೋತ್ಸವವು ಸಂಭ್ರಮದಿಂದ ನೆರವೇರಿತು.
ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಸುತ್ತಮುತ್ತಲಿನ ಗ್ರಾಮಗಳಿಂದ ಕುಟುಂಬ ಸಮೇತ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಳಗಿನ ಜಾವ ಉತ್ಸವ ರಾಯರ ಪಾದಪೂಜೆ ಬಳಿಕ, ಸಂಸ್ಕೃತ ವಿದ್ಯಾಪೀಠದಿಂದ ಮಠದವರೆಗೂ ವಾದ್ಯವೈಭವದೊಂದಿಗೆ ಮೆರವಣಿಗೆ ನಡೆಯಿತು. ಆನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಉತ್ಸವರಾಯರ ಮುಂದೆ ಬಣ್ಣ ಎರಚಿ ವಸಂತೋತ್ಸವ ಆಚರಿಸಿದರು. ಉತ್ಸವಮೂರ್ತಿಯನ್ನು ಮಹಾರಥೋತ್ಸವದಲ್ಲಿ ಇರಿಸಿದ ಬಳಿಕ, ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಆನಂತರ ರಥೋತ್ಸವ ನಡೆಯಿತು.
ಭಜನೆ, ಕೋಲಾಟ, ಬಹಿರೂಪಿ, ಜಾಂಜ್ ಪತಾಕ್, ಚಂಡಿವಾದ್ಯ, ಡೊಳ್ಳು ಕುಣಿತ, ಕರಗ ಕುಣಿತ ಕಲಾಗಿದರು ರಥೋತ್ಸವದ ಎದುರು ಕಲೆ ಪ್ರದರ್ಶನ ಮಾಡುತ್ತಾ ಸಾಗಿದ್ದು ವಿಶೇಷವಾಗಿತ್ತು. ಶ್ರೀಗಳು ಹೆಲಿಕಾಪ್ಟರ್ ಮೂಲಕ ರಥೋತ್ಸವದ ಪುಷ್ಪವೃಷ್ಟಿ ಮಾಡಿದರು.