ಅತ್ಯಂತ ಅಣುಸ್ವರೂಪವಾದ ' ಮನಸ್ಸು' ಜಡಭೂತವಾಗಿದೆ. ಅಹಂಕಾರತತ್ವ ಸ್ವರೂಪವಾದ ಮನಸ್ಸು ಅನಾದಿಕಾಲದಿಂದಲೂ ತೇಜೋಮಯವಾಗಿದ್ದರೂ ಕೂಡ ಜೀವನ ಜೊತೆ ಅಂಟಿಕೊಂಡು ಬಂದಿರುತ್ತದೆ. ಲಿಂಗದೇಹ ಭಂಗವಾಗುವ ತನಕ ಇದರ ಅಸ್ತಿತ್ವ. ಅನಂತರ ಜೀವನಿಗೂ ಮನಸ್ಸಿಗೂ ಯಾವುದೇ ಸಂಬಂಧ ವಿರುವುದಿಲ್ಲ. ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯಗಳೆಂಬ ಹತ್ತು ಮಕ್ಕಳನ್ನು ಈ ಮನಸ್ಸು ಹೊಂದಿರುತ್ತದೆ. ಇವೆಲ್ಲದರ ಜವಾಬ್ದಾರಿ ಅನಾದಿಕಾಲದಿಂದ ಪ್ರತಿಶರೀರದಲ್ಲಿಯೂ ಇದ್ದೇ ಇರುತ್ತದೆ. ಯಾರೇ ಒಬ್ಬ ಮನುಷ್ಯನು ಮರಣವನ್ನು ಹೊಂದಿದರೆ ದೇಹ ನಾಶವಾಗುತ್ತದೆ ಹೊರತು, ಮನಸ್ಸಾಗಲೀ, ಕರ್ಮೇಂದ್ರಿಯ ಜ್ಞಾನೇಂದ್ರಿಯಗಳಾಗಲೀ ನಾಶವನ್ನು ಹೊಂದುವುದಿಲ್ಲ. ವಿವಿಧ ಪ್ರಾಣಿಗಳ ಶರೀರದಲ್ಲಿ, ವೃಕ್ಷಾದಿಗಳ ಶರೀರದಲ್ಲಿ, ಮನುಷ್ಯಾದಿ ಶರೀರಗಳಲ್ಲಿ ಈ ಇಂದ್ರಿಯಗಳೆಲ್ಲವೂ ವ್ಯತ್ಯಾಸವಾಗದೇ ಬರುತ್ತಿರುತ್ತವೆ. ಆದ್ದರಿಂದಲೇ ಜನ್ಮಾಂತರದ ಸಂಸ್ಕಾರವನ್ನು ಪ್ರತಿಯೊಬ್ಬರೂ ಹೊಂದಿಯೇ ಇರುತ್ತಾರೆ.