ರಾಯಚೂರು: ಮಂತ್ರಾಲಯ ಬಳಿ ತುಂಗಭದ್ರಾ ಪುಷ್ಕರ ಪುಣ್ಯಸ್ನಾನಕ್ಕೆಆಂಧ್ರಪ್ರದೇಶದ ಪೊಲೀಸರು ಶನಿವಾರದಿಂದ ತಡೆ ಒಡ್ಡಿದ್ದಾರೆ. ‘ಕೋವಿಡ್ –19 ತಡೆ ಮುನ್ನೆಚ್ಚರಿಕೆಯಾಗಿಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳುತ್ತಿದ್ದಾರೆ.
ಡಿ.1ರವರೆಗೆ ನಡೆಯಲಿದ್ದ ಪುಷ್ಕರ ಮೇಳದ ಮೊದಲ ದಿನವಾದಶುಕ್ರವಾರ, ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನದಿಯಲ್ಲಿ ಮಿಂದು, ಕಳಸ ಪೂಜೆ ನೆರವೇರಿಸಿ ಪುಷ್ಕರ ಮೇಳಕ್ಕೆ ಚಾಲನೆ ನೀಡಿದ್ದರು. ಅಂದು ಅಪಾರ ಸಂಖ್ಯೆಯ ಭಕ್ತರು ಪುಣ್ಯಸ್ನಾನ ಮಾಡಿದ್ದರು.
‘ಕೋವಿಡ್ ನಿಯಮ ಪಾಲನೆ ಎಲ್ಲರಿಗೂ ಕಡ್ಡಾಯ. ನದಿ ಸ್ನಾನದ ಕುರಿತು ಮಠದಿಂದ ಯಾವುದೇ ಸಡಿಲಿಕೆಯನ್ನು ಕೇಳುವುದಕ್ಕೆ ಆಗುವುದಿಲ್ಲ. ಆಂಧ್ರಪ್ರದೇಶದಲ್ಲಿ ತುಂಗಭದ್ರಾ ನದಿಯಲ್ಲಿ ಎಲ್ಲಿಯೂ ಸ್ನಾನಕ್ಕೆ ಸರ್ಕಾರ ಅವಕಾಶ ನೀಡುತ್ತಿಲ್ಲ’ ಎಂದು ಮಂತ್ರಾಲಯ ಮಠದ ಮಾಧ್ಯಮ ಸಮನ್ವಯ ಅಧಿಕಾರಿ ಶ್ರೀನಿವಾಸರಾವ್ ಎಸ್.ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.
ಬಾರದ ಜನ:ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯ ವಿಜಯದಾಸರ ಕಟ್ಟೆ ಬಳಿ ಹಾಗೂ ಸಿಂಧನೂರು ತಾಲ್ಲೂಕಿನ ದಡೇಸೂಗುರು ಶಿವದೇವಾಲಯ ಬಳಿತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಅವಕಾಶ ಇದೆ. ಕೋವಿಡ್ ನಿಯಮ ಪಾಲಿಸುವಂತೆರಾಯಚೂರು ಜಿಲ್ಲಾ ಆಡಳಿತ ಸೂಚಿಸಿದೆ. ಆದರೆ, ಇಲ್ಲಿಗೆ ಜನ ಬರುತ್ತಿಲ್ಲ.