ರಾಯಚೂರು: ಸಮಾಜದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಮಾನವ ಜನಾಂಗದ ಅಭಿವೃದ್ಧಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಆರೋಗ್ಯ ಇಲಾಖೆ ಡಾ.ಎಂ.ಎನ್.ನಂದಿತಾ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನಸಿಕ ಕಾಯಿಲೆಯ ಪರಿಣಾಮಗಳು ವ್ಯಕ್ತಿಗೆ ಸೀಮಿತವಾಗದೇ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವ ವ್ಯಾಪಿಯಾಗಿರುತ್ತದೆ. ಈ ಕಾಯಿಲೆಯಿಂದ ಮಾನವ ದುಡಿಮೆಯ ದಿನಗಳು ನಷ್ಟವಾಗಿ ರಾಷ್ಟ್ರದ ಪ್ರಗತಿಗೆ ಮಾರಕವಾಗಿದೆ ಎಂದರು.
ಸಮಾಜದಲ್ಲಿ ಮಾನಸಿಕ ರೋಗದ ಬಗ್ಗೆ ಕಳಂಕ ಇರುವುದರಿಂದ ಜನರು ಚಿಕಿತ್ಸೆ ಪಡೆದುಕೊಳ್ಳದೇ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಇಲಾಖೆಯ ಮಾನಸಿಕ ವಿಭಾಗದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮನೋ ವೈದ್ಯ ಡಾ.ಮನೋಹರ ಪತ್ತಾರ ಮಾತನಾಡಿ, ವಿಶ್ವದ ಶೇ 1ರಷ್ಟು ಜನರು ತೀವ್ರ ತರದ ಹಾಗೂ ಶೇ 25ರಷ್ಟು ಜನರು ಅಲ್ಪ ಪ್ರಮಾಣ ಕಾಯಿಲೆಯಿಂದ ಬಳಲುತ್ತಿದ್ದಾರೆ. ರೋಗದ ಬಗ್ಗೆ ಜಾಗೃತಿ ಮೂಡಿಸಿ ಕಳಂಕ ತೊಲಗಿಸಲು ಪರಿಣಾಮಕಾರಿ ಚಿಕಿತ್ಸೆ ಒದಗಿಸಬೇಕು ಎಂದು ಹೇಳಿದರು.
ಸಿಬ್ಬಂದಿ ಅರುಣಕುಮಾರ, ಸುವರ್ಣ, ಮೃತ್ಯುಂಜಯ, ಹಾಜಿಅಲಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು. ಅಲಾಂಪಾಷ ವಂದಿಸಿದರು.