ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಿಂದೂಗಳು ಹಾಗೂ ಮುಸ್ಲಿಮರು ಮೊಹರಂ ಹಬ್ಬವನ್ನು ಸೌಹಾರ್ದದಿಂದ ಮಂಗಳವಾರ ಆಚರಣೆ ಮಾಡಿದರು.
ಆಯಾ ಬಡಾವಣೆಗಳ ಮಸೀದಿಗಳ ಎದುರಿಗೆ ಪಂಜಾಗಳ ಮೆರವಣಿಗೆ ನಡೆಸಲಾಯಿತು. ಹೊಸ ವಸ್ತ್ರ, ಹೂವಿನ ಹಾರದಿಂದ ಅಲಂಕಾರ ಮಾಡಿದ್ದ ಪಂಜಾಗಳನ್ನು ಅಲಾಯಿಗಳು ಹೊತ್ತು ಸಾಗಿದರು. ಸಂಜೆ ನಗರದ ಜಾಕೀರ ಹುಸೇನ್ ವೃತ್ತದ ಸಮೀಪ ನೆರೆದಿದ್ದ ಮೆರವಣಿಗೆಗಳು ಜನರ ಗಮನ ಸೆಳೆದವು. ನಗರದ ವಿವಿಧ ವೃತ್ತಗಳಲ್ಲಿ ಮೊಹರಂ ಹಬ್ಬದ ನಿಮಿತ್ತ ತಂಪು ಪಾನಿಯ ವಿತರಣೆ ಮಾಡಲಾಯಿತು.
ಉಪ್ಪಾರವಾಡಿ:
ಉಪ್ಪಾರವಾಡಿಯ ಬ್ರೇಸ್ತವಾರ ಪೇಟೆಯ ಭಗೀರಥ ಉಪ್ಪಾರ ಸಮಾಜದ ಯುವಕರು ಹುಸೇನಿ ಆಲಂ ಹಾಶರ್ ಖಾನಾ ಪಂಜಾ ಮೆರವಣಿಗೆ ನಡೆಸಿದರು.
ಮುಖಂಡರಾದ ಆದಿರಾಜ್ ಆದೋನಿ, ಜಿಲ್ಲಾ ನವ ಯುವಕರ ಸಂಘದ ಅಧ್ಯಕ್ಷ ಜೂಕೂರು ಶ್ರೀನಿವಾಸ, ಲಕ್ಷಿಪತಿ ಬಸವರಾಜ, ಮುನಿಯಪ್ಪ, ರವಿಕುಮಾರ, ನಾಗರಾಜ, ಆರ್.ಸುರೇಶ್, ಸತೀಶ ಸಾಗರ, ತಾಯಪ್ಪ, ರಂಗನಾಥ, ನಾಗರಾಜ, ಅನಿಲಕುಮಾರ, ಫರೀದ್, ಮುಜಾವರ್ ಪಾಲ್ಗೊಂಡಿದ್ದರು.
ಪೊಲೀಸ್ ಬಂದೋಬಸ್ತ್:
ಗಣೇಶ ಉತ್ಸವದ ನಿಮಿತ್ತ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗಳ 9ನೇ ದಿನದ ವಿಸರ್ಜನೆ ಕಾರ್ಯಕ್ರಮದ ಮೆರವಣಿಗೆ ಕೂಡ ಮಂಗಳವಾರವೇ ನಡೆದಿರುವುದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.