ರಾಯಚೂರು: ಪ್ರವಾದಿ ಮಹಮ್ಮದ್ ಫೈಗಂಬರ್ ಅವರ ಹುಟ್ಟುಹಬ್ಬವನ್ನು ಮುಸ್ಲಿಮರ ಈದ್ ಮಿಲಾದ್ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಮಂಗಳವಾರ ಹಬ್ಬದ ವೇಳೆ ಮೆರವಣಿಗೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಮುಖಂಡರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ ನಿಯಮನುಸಾರ ಅಗತ್ಯ ಮುನ್ನೆಚ್ಚೆರಿಕಾ ಕ್ರಮ ವಹಿಸಿಕೊಂಡು ಶಾಂತಿಯುತವಾಗಿ ಮೆರವಣಿಗೆ ನಡೆಸಲಾಗುವುದು. ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಸಹಜ ಸ್ಥಿತಿಗೆ ಜನಜೀವನ ಇದೆ. ಪ್ರತಿವರ್ಷ ಈದ್ ಮಿಲಾದ್ ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳ ಆಚರಣೆ ಮಾಡಿದ್ದೇವೆ ಎಂದರು.
ಕೋವಿಡ್ನಿಂದ ಚೇತರಿಕೆಯಾಗಿದೆ. ಈ ಬಾರಿ ಹಬ್ಬದ ಸಂದರ್ಭದಲ್ಲಿ ಮೆರವಣಿಗೆಗೆ ಅನುಮತಿ ನೀಡಬೇಕು. ಸ್ವಯಂಪ್ರೇರಿತವಾಗಿ ಡಿ.ಜೆ ಹಾಗೂ ಧ್ವನಿವರ್ಧಕವನ್ನು ಬಳಸದಿರಲು ತೀರ್ಮಾನಿಸಿದ್ದು ಮೆರವಣಿಗೆ ಮಾತ್ರ ನಡೆಸುತ್ತೇವೆ. ಈಗಾಗಲೇ ರಾಜಕೀಯ ಪಕ್ಷಗಳ ರ್ಯಾಲಿಗಳು, ಸಭೆ ಸಮಾರಂಭಕ್ಕೆ ಅನುಮತಿ ನೀಡಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದಾರೆ.
ಈದ್ ಮಿಲಾದ್ ಹಬ್ಬದಂದು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.