ರಾಯಚೂರು: ಜಿಲ್ಲೆಯಲ್ಲಿ ಶ್ರಾವಣಮಾಸದ ನಾಗರಪಂಚಮಿ ಹಬ್ಬವನ್ನು ಮಹಿಳೆಯರು ಸಂಭ್ರಮ, ಸಂತೋಷದಿಂದ ಆಚರಿಸಿದರು.
ಗುರುವಾರ ಬೆಳಗಾಗುತ್ತಿದ್ದಂತೆ ಮಹಿಳೆಯರು ಗುಂಪು ಗುಂಪಾಗಿ ದೇವಸ್ಥಾನಗಳತ್ತ ತೆರಳುವುದು ಸಾಮಾನ್ಯವಾಗಿತ್ತು. ಕಲ್ಲಿನ ನಾಗರ ಮೂರ್ತಿಗಳಿಗೆ ಹಾಲುಹಾಕಿ, ದೀಪ ಉರಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರಳಿಕಟ್ಟೆಗಳ ಮೇಲಿರುವ ನಾಗಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದಲ್ಲದೆ, ಪ್ರದಕ್ಷಿಣೆ ಹಾಕುತ್ತಿರುವುದು ಕಂಡುಬಂತು.
ನಾಗರಪಂಚಮಿ ನಿಮಿತ್ತ ಪ್ರತಿಯೊಬ್ಬರ ಮನೆಗಳಲ್ಲೂ ಸಿಹಿಖಾದ್ಯಗಳನ್ನು ತಯಾರಿಸಲಾಗಿದೆ. ಲಡ್ಡು, ಎಳ್ಳು ಹಾಗೂ ಚಕ್ಕುಲಿಗಳನ್ನು ಮಕ್ಕಳು ಸವಿದು ಸಂತೋಷಪಟ್ಟರು. ಮಕ್ಕಳು ಕೊಬ್ಬರಿ ಗುಂಡಗಳನ್ನು ತಿರುಗಿಸಿ ಆಟವಾಡಿದರು. ಕೆಲವು ಕಡೆಗಳಲ್ಲಿ ಮಹಿಳೆಯರು ಜೋಕಾಲಿಗಳಲ್ಲಿ ತೂಗಿಕೊಂಡು ಹಬ್ಬದ ಸಡಗರ ಹೆಚ್ಚಿಸಿದರು.