ರಾಯಚೂರು: ‘ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಕಾನೂನು ಸೂವ್ಯವಸ್ಥೆ ಕಾಪಾಡಿ ಪೊಲೀಸ್ ವ್ಯವಸ್ಥೆ ಸರಿಪಡಿಸಲು ಕೆಲಸ ಮಾಡುತ್ತೇನೆ’ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ ಅಮೃತ್ ಹೇಳಿದರು.
ಮಂಗಳವಾರ ಅಧಿಕಾರ ಸ್ವೀಕರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿನ ಅಕ್ರಮ ಮರಳು ಸಾಗಣೆ, ಮಟ್ಕಾ ಹಾಗೂ ಸಿಎಚ್ ಪೌಡರ್ನಿಂದ ಹೆಂಡ ತಯಾರಿಕೆಯ ಬಗ್ಗೆ ಮಾಹಿತಿ ಇದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ತಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟಲು ಹಿಂದಿನ ಎಸ್ಪಿ ಅವರಿಂದ ಮಾಹಿತಿ ಪಡೆದು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಹತೋಟಿಗೆ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿನ ಕಳ್ಳತನ ಪ್ರಕರಣಗಳನ್ನು ತಡೆಯಲು ರಾತ್ರಿ ವೇಳೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ನಿಗಾ ವಹಿಸಲಾಗುವುದು. ಸಾರ್ವಜನಿಕರ ಕುಂದು ಕೊರತೆ ಆಲಿಸಲು ಆದ್ಯತೆ ನೀಡುತ್ತೇನೆ. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಲು ಕಚೇರಿಯಲ್ಲಿ ಮುಕ್ತ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.