ರಾಯಚೂರು: ಜಿಲ್ಲೆಯಲ್ಲಿ ಬೆಂಕಿಯಂತಹ ಬಿಸಿಲು ಮುಂದುವರೆದಿದ್ದು, ನಗರದ ಗೋಶಾಲಾ ರಸ್ತೆಯಲ್ಲಿ ಭಾನುವಾರ ವೃದ್ದರೊಬ್ಬರು ಬಿಸಿಲಿನಿಂದ ಬಳಲಿ ಮೃತಪಟ್ಟಿದ್ದಾರೆ.
ಮೃತ ವೃದ್ಧನನ್ನು ನಗರದ ಯಕ್ಲಾಸಪುರ ಬಡಾವಣೆಯ ರಾಮಣ್ಣ ಕಬ್ಬೇರ್ (70) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಹೊರಟಿದ್ದಾಗ ಒಮ್ಮೆಲೇ ತಲೆ ಸುತ್ತು ಬಂದು ನಿಶ್ಯಕ್ತಿಗೆ ಒಳಗಾಗಿ ರಸ್ತೆ ಬದಿಯಲ್ಲೇ ನೆಲದಲ್ಲಿ ಮಲಗಿದರು. ನಂತರ ಮೇಲೇಳಲಿಲ್ಲ.
ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈ ವ್ಯಕ್ತಿ ಸಾರ್ವಜನಿಕರು ಕೊಡುವ ಆಹಾರ ಸೇವಿಸುತ್ತಿದ್ದ. ಬಿಸಿಲಿನ ಝಳದಿಂದ ಬಳಲಿದ್ದ. ಕುಸಿದು ಬಿದ್ದವ ಮತ್ತೆ ಮೇಲೆ ಏಳಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪಂಚನಾಮೆ ಮಾಡಿದರು. ನಂತರ ಕುಟುಂಬದ ಸದಸ್ಯರು ವೃದ್ಧನ ಶವವನ್ನು ಕೊಂಡೊಯ್ದರು.
ಮಾರ್ಚ್ 3ರಂದು ಜಿಲ್ಲೆಯ ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ಮಸ್ಕಿ ತಾಲ್ಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ (62) ಎಂಬುವವರು ಮೃತಪಟ್ಟಿದ್ದರು. ಬಿಸಿಲಿನ ತಾಪದ ಬಳಲಿಕೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು.