ಮಸ್ಕಿ: ಮಸ್ಕಿ ಜಲಾಶಯದಿಂದ 1600 ಕ್ಯುಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಬುಧವಾರ ತಾಲ್ಲೂಕಿನ ಬಳಗಾನೂರು ಹಿರೇಹಳ್ಳ ತುಂಬಿ ಹರಿದಿದೆ. ಇದರಿಂದಾಗಿ ಮಾನ್ವಿ ತಾಲ್ಲೂಕಿನ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.
ಜಲಾಶಯದ ಮೇಲ್ಭಾಗದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಮಸ್ಕಿ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡುತ್ತಿದ್ದು ಪ್ರವಾಹದ ಭೀತಿ ಉಂಟಾಗಿದೆ. ಹಳ್ಳದ ದಂಡೆಯ ಹೊಲ ಗದ್ದೆಗಳು ಜಲಾವೃತಗೊಂಡಿವೆ. ಬೆಳೆ ಹಾಳಾಗಿದೆ. ರೈತರು ಪಂಪ್ಸೆಟ್ಗಳು ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ.
ನಾರಾಯಣನಗರ ಕ್ಯಾಂಪ್ ಸೇರಿದಂತೆ ಮಾನ್ವಿ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದ್ದರಿಂದ ಸಾರ್ವಜನಿಕರು ಮಸ್ಕಿ ಮಾರ್ಗವಾಗಿ ಪ್ರಯಾಣಿಸಿದರು.
ಮಾನ್ವಿ ಹಾಗೂ ಮಸ್ಕಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಬಳಗಾನೂರು ಹಳ್ಳದ ಸೇತುವೆ ಕಾಮಗಾರಿ ನಡೆದಿದ್ದರಿಂದ ಅದರ ಪಕ್ಕದಲ್ಲಿ ₹ 75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಹಳ್ಳದ ಪ್ರವಾಹದಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.
ತಾಲ್ಲೂಕು ಆಡಳಿತದ ಸೂಚನೆಯಂತೆ ಹಳ್ಳದ ಹತ್ತಿರ ಸಾರ್ವಜನಿಕರು ಹೋಗದಂತೆ ಮುನ್ನೇಚ್ಚರಿಕೆಯಾಗಿ ಬ್ಯಾರಿಕೇಡ್ ಹಾಗೂ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರು ಹಳ್ಳದ ಹತ್ತಿರ ಹೋಗದಂತೆ ಬಳಗಾನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದುರಗಪ್ಪ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ. ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸ್ಥಳದಲ್ಲಿದ್ದು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.