ರಾಯಚೂರು: ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಅವಧಿಯಲ್ಲಿ ಔಷಧಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಸಮಾಜಕ್ಕೆ ಹಾಗೂ ರೋಗಿಗಳಿಗೆ ಸಹಕಾರ ಮಾಡಬೇಕು ಎಂದು ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ.ಶ್ರೀನಿವಾಸ ಹೇಳಿದರು.
ನಗರದ ನವೋದಯ ಶಿಕ್ಷಣ ಸಂಸ್ಥೆಯ ಡಾ.ಗುರುಮೂರ್ತಿ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಫಾರ್ಮಾಸಿಸ್ಟ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಿ ಫಾರ್ಮ್ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಔಷಧ ಕೇಂದ್ರದಲ್ಲಿ ಕೆಲಸ ಮಾಡುವ ಮೂಲಕ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು ಎಂದರು.
ಪ್ರಾಧ್ಯಾಪಕ ಡಾ.ಸರಫರಾಜ್ ಮಾತನಾಡಿ, ರೋಗಿಗಳಿಗೆ ಔಷಧಗಳನ್ನು ನೀಡುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಔಷಧಗಳ ಬಳಕೆಯ ವಿಧಾನ ಹಾಗೂ ದುಷ್ಪರಿಣಾಮ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.