ಮಸ್ಕಿ: ಚುನಾವಣೆಯಲ್ಲಿ ಆರ್. ಬಸನಗೌಡರ ವಿರುದ್ಧ ಅಡ್ಡ ಮತದಾನದ ಮೂಲಕ ಗೆದ್ದಿರಬಹುದು. ಈ ಬಾರಿ ಉಪಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯುವುದಿಲ್ಲ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೋಲು ಶತಸಿದ್ಧ ಎಂದು ಕಾಂಗ್ರೆಸ್ ಮುಖಂಡ ಆರ್.ಸಿದ್ದನಗೌಡ ಹೇಳಿದರು.
ತಾಲೂಕಿನ ಅಂತರಗಂಗಿಯ ದುರ್ಗಾದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯ
ಕರ್ತರ ಹಾಗೂ ಆರ್.ಬಸನಗೌಡ ಬೆಂಬಲಿಗರ ಸಭೆಯಲ್ಲಿ ಮಾತನಾಡಿ. ಕಳೆದ ಚುನಾವಣೆ ವೇಳೆ ಅಕ್ರಮ ಮತದಾನದ ಮೂಲಕ ಪ್ರತಾಪಗೌಡ ಪಾಟೀಲ್ ಆಯ್ಕೆಯಾಗಿದ್ದರು. ಈ ಉಪ ಚುನಾವಣೆಯಲ್ಲಿ ಮತದಾರರು ನ್ಯಾಯ ನೀಡುವ ಕಾಲ ಬಂದಿದೆ
ಎಂದರು
ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಸ್ಥಾನಕ್ಕೆ ಅವರು ಬಂದು ಸೇರಿದ್ದಾರೆ. ಇದರಿಂದ ಮೂಲ ಬಿಜೆಪಿಗರಿಗೆ ಅನ್ಯಾಯವಾಗಿದೆ, ಆರ್. ಬಸನಗೌಡ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಕಾರ್ಯಕರ್ತರ ಹಿತಕ್ಕಾಗಿ ಕಾಡಾ ಅಧ್ಯಕ್ಷ ಹಾಗೂ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಆದ ಅನ್ಯಾಯವನ್ನು ಸರಿಪಡಿಸುವ ಮೂಲಕ ಪ್ರತಾಪಗೌಡರನ್ನು ಸೋಲಿಸಿ, ಆರ್.ಬಸನಗೌಡ ತುರುವಿಹಾಳರನ್ನು ಗೆಲ್ಲಿಸ
ಬೇಕು ಎಂದು ಮನವಿ ಮಾಡಿದರು.
ಮುಖಂಡ ಸಿದ್ದನಗೌಡ ಹೂವಿನಭಾವಿ ಮಾತನಾಡಿ, ಆರ್.ಬಸನಗೌಡ ತುರುವಿಹಾಳ ಕಾಂಗ್ರೆಸ್ ಸೇರದಂತೆ ಬಿಜೆಪಿ ವರಿಷ್ಠರು ಒತ್ತಡ ಹಾಕಿದ್ದರು. ಕಾಡಾ ಅಧ್ಯಕ್ಷ ಸ್ಥಾನದ ಜತೆಗೆ ಹೆಚ್ಚಿನ ಅನುದಾನದ ಭರವಸೆ ನೀಡಿದ್ದರು. ಆದರೆ ಇಲ್ಲಿ ಕಾರ್ಯಕರ್ತರಿಗೆ ಆದ ಅನ್ಯಾಯವನ್ನು ಕೇಳದಾದರು. ಇದಕ್ಕಾಗಿಯೇ ನಾವೆಲ್ಲರೂ ಸೇರಿ ಬಸನಗೌಡರನ್ನು ಕಾಂಗ್ರೆಸ್ ಗೆ ಕರೆತಂದಿದ್ದೇವೆ. ಬಸನಗೌಡ ತುರುವಿಹಾಳಗೆ ಅಧಿಕಾರ, ಹಣದ ಆಸೆ ಇದ್ದಿದ್ದರೆ, ಕಾಂಗ್ರೆಸ್ಗೆ ಬರುತ್ತಿರಲಿಲ್ಲ. ಸ್ವಾಭಿಮಾನ, ಕಾರ್ಯಕರ್ತರಿಗೆ ಆದ ಅಪಮಾನ ನಿವಾರಿಸಲು ಕಾಂಗ್ರೆಸ್ ಸೇರಿದ್ದಾರೆ. ಅವರೆಲ್ಲರನ್ನೂ ನಾವು ಬೆಂಬಲಿಸಬೇಕು. ನಮ್ಮ ಬಳಿ ಹಣ ಇರದೇ ಇರಬಹುದು. ಭೀಕ್ಷೆ ಬೇಡಿಯಾದರೂ ಚುನಾವಣೆ ಖರ್ಚು ನಿಭಾಯಿಸಿ ಆರ್.ಬಸನಗೌಡ ತುರುವಿಹಾಳರನ್ನು ಗೆಲ್ಲಿಸಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ಹಿಟ್ಲರ್ ಮಾದರಿಯ ಆಡಳಿತವನ್ನು ಕೊನೆಗಾಣಿ
ಸಬೇಕು ಎಂದು ಕರೆ ನೀಡಿದರು.ಮುಖಂಡರಾದ ಮಲ್ಲನಗೌಡ ಗುಂಡಾ, ಮಹಾಂತೇಶ ಅಮೀನಗಡ, ರುದ್ರಗೌಡ ತಿಡಿಗೋಳ, ಬಸವರಾಜ ವಟಗಲ್, ತಾ.ಪಂ. ಅಧ್ಯಕ್ಷ ಶಿವಣ್ಣ, ತಾ.ಪಂ.ಸದಸ್ಯ ಚಂದ್ರಶೇಖರ, ಸಿದ್ದನಗೌಡ ನಾಗರಬೆಂಚಿ ಸೇರಿ ಇತರರು ಇದ್ದರು.
ಬೈಕ್ ರಾಲಿ : ಸಭೆ ಬಳಿಕ ಅಂತರಗಂಗಿಯಿಂದ ಮಸ್ಕಿವರೆಗೂ ಬೈಕ್ ರಾಲಿ ಮೂಲಕ ಆಗಮಿಸಿದ ನೂರಾರು ಕಾರ್ಯಕರ್ತರು ಮಸ್ಕಿಯ ಬಸವೇಶ್ವರ ನಗರದಲ್ಲಿನ ಕಾಂಗ್ರೆಸ್ ಕಚೇರಿ ತಲುಪಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.