ದೇವದುರ್ಗ (ರಾಯಚೂರು ಜಿಲ್ಲೆ): ಲೈಂಗಿಕ ಕಿರುಕುಳ ನೀಡಿದ ಹಾಗೂ ಎರಡನೇ ಮದುವೆಯಾಗಿರುವ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಸರಕಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸಿದ್ದಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಪ್ರಾಂಶುಪಾಲ ಸಿದ್ದಪ್ಪ ಅವರು ಎರಡನೇ ಹೆಂಡತಿಯೊಂದಿಗೆ ಇರುವ ಫೋಟೊ, ವಿದ್ಯಾರ್ಥಿನಿಯರೊಂದಿಗೆ ಇರುವ ಅಶ್ಲೀಲ ಚಿತ್ರ, ವಿಡಿಯೊ ಹಾಗೂ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಹೀಗಾಗಿ ಇಲಾಖೆಯು ತಂಡ ರಚಿಸಿ ತನಿಖೆಗೆ ಆದೇಶಿಸಿತ್ತು.
ಡಿಡಿಪಿಯು ಸೋಮಶೇಖರ ಹೊಕ್ರಾಣಿ ನೇತೃತ್ವದ ತ್ರಿಸದಸ್ಯ ಸಮಿತಿಯು ಅ.2ರಂದು ಕಾಲೇಜಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಾಲಕರ ಜೊತೆಗೆ ಸಭೆ ನಡೆಸಿತ್ತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆ ಮಾಡಿ ರಾಜ್ಯ ನಿರ್ದೇಶಕರಿಗೆ ಪ್ರಾಥಮಿಕ ವರದಿಯನ್ನು ನೀಡಿತ್ತು.
ಸಿದ್ದಪ್ಪ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಕಾರಣ ಇಲಾಖೆ ತನಿಖೆಗೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಯು ಸೋಮಶೇಖರಪ್ಪ ಹೊಕ್ರಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.