ರಾಯಚೂರು: ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣಕ್ಕಾಗಿ, ಪುತ್ರನ ಪಿತ್ರಾರ್ಜಿತ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾಯಿಸುವಂತೆ ಇಲ್ಲಿಯ ಉಪ ವಿಭಾಗಾಧಿಕಾರಿ ನ್ಯಾಯಾಲಯ ಆದೇಶಿಸಿದೆ.
ಸಿರವಾರ ತಾಲ್ಲೂಕು ಕವಿತಾಳದ ಖತೇಜಾ ಬೇಗಂ ಅವರು, ‘ನನ್ನ ಮಗ ಹುಸೇನ್ಬಾಷಾ ಪಿತ್ರಾರ್ಜಿತವಾಗಿ ಬಂದಿದ್ದ 3 ಎಕರೆ 28 ಗುಂಟೆ ಜಮೀನನ್ನು 2015ರಲ್ಲಿ ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾನೆ. ಆದರೆ, ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಜಮೀನನ್ನು ನನ್ನ ಹೆಸರಿಗೆ ವರ್ಗಾಯಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು, ‘ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ–2007’ರ ಅಡಿಯಲ್ಲಿ ಆಸ್ತಿ ನೋಂದಣಿಯನ್ನು ರದ್ದುಗೊಳಿಸಿ ತಾಯಿ ಹೆಸರಿಗೆ ಖಾತಾ ವರ್ಗಾವಣೆ ಮಾಡುವಂತೆ ಗುರುವಾರ ಆದೇಶ ನೀಡಿದ್ದಾರೆ.
ಉಪವಿಭಾಗಾಧಿಕಾರಿ ಜುಲೈ 27ರಂದು ವಿಚಾರಣೆ ನಿಗದಿ ಮಾಡಿದ್ದರೂ ಹುಸೇನ್ ಬಾಷಾ ವಿಚಾರಣೆಗೆ ಹಾಜರಾಗಿರಲಿಲ್ಲ. ಆ. 4ರಂದು ವಿಚಾರಣೆ ಪೂರ್ಣಗೊಳಿಸಿ, ಆ. 6ರಂದು ಆದೇಶ ಹೊರಡಿಸಿದ್ದಾರೆ.