ರಾಯಚೂರು: ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಕೈಬಿಡಬೇಕು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಭಾಷೆಗಳಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣದ) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತದ ಮೂಲಕ ಪ್ರಧಾನಿಮಂತ್ರಿಗೆ ಮನವಿ ಸಲ್ಲಿಸಿ, ಪ್ರತಿವರ್ಷ ಸೆಪ್ಟಂಬರ್ 14 ರಂದು ಹಿಂದಿ ಸಪ್ತಾಹ ದಿನಾಚರಣೆ ಹೆಸರಿನ ಮೇಲೆ ದಕ್ಷಣಿ ಭಾರತದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುತ್ತಿರುವುದು ಖಂಡನೀಯ. ಒಕ್ಕೂಟ ವ್ಯವಸ್ಥೆಯ ಭಾರತ ದೇಶದಲ್ಲಿ ದಿನೇ ದಿನೇ ಪ್ರಾದೇಶಿಕ ಅಸಮಾನತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿನ ಎಲ್ಲಾ 22 ಭಾಷೆ ಅಧಿಕೃತ ಭಾಷೆ ಎಂದು ಘೋಷಣೆ ಮಾಡಬೇಕು ಹಾಗೂ ಶಿಕ್ಷಣ ,ಉದ್ಯೋಗ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ಭಾಷೆಗಳಿಗೆ ಸಮಾನ ಹಕ್ಕು ನೀಡಬೇಕು. ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡದಂತಹ ಕಾರ್ಯಕ್ರಮಗಳನ್ನು ಕೂಡಲೇ ಕೈಬಿಡಬೇಕು ಸೆ. 14 ರಂದು ಭಾರತೀಯ ಭಾಷಾ ದಿನವಾಗಿಸಿ ಎಲ್ಲಾ ಭಾಷೆಗಳಿಗೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ. ವಿನೋದ ರೆಡ್ಡಿ, ಮುಖಂಡ ಕೊಂಡಪ್ಪ, ಜಿಂದಪ್ಪ, ರಮೇಶ, ಶರಣಪ್ಪ, ಸಾದಿಕ್, ಪೇರೋಜ್, ವೆಂಕಟೇಶ್, ಸುರೇಶ, ಈರೇಶ, ಪ್ರಕಾಶ ಇದ್ದರು.