ರಾಯಚೂರು: ‘ಶಾಸಕರೇ ಸೇವಕವೆಂದು ರಾಯಚೂರು ಜನರು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಆದರೆ, ಮಾತನಾಡುವಾಗ ಶಾಸಕರಿಗೆ ಪರಿಜ್ಞಾನ ಇರಲ್ವಾ’ಎಂದು ವಿಧಾನ ಪರಿಷತ್ ಸದಸ್ಯ ಟಿ.ಶರವಣ ಪ್ರಶ್ನಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಾಯಚೂರು ಅಭಿವೃದ್ಧಿ ಮಾಡಬೇಕಾಗಿತ್ತು. ಅದು ಬಿಟ್ಟು ಸಚಿವರ ಮುಂದೆ ರಾಯಚೂರು ತೆಲಂಗಾಣಕ್ಕೆ ಸೇರಿಸಿ ಅಂತ ಹೇಳಿದ್ದಾರೆ. ಇವರಿಗೆ ನೈತಿಕತೆ ಇಲ್ವಾ’ಎಂದರು.
‘ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಹೇಳಿಕೆ ಖಂಡನೀಯ’ಎಂದು ತಿಳಿಸಿದರು.
‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೀವಂತವಾಗಿದೆ. ನಾವು ಜೀವಂತವಾಗಿ ಇರುವರೆಗೂ ಯಾವುದೇ ಕಾರಣಕ್ಕೂ ರಾಯಚೂರು ತೆಲಂಗಾಣಕ್ಕೆ ಸೇರಿಸಲು ಬಿಡಲ್ಲ. ರಾಯಚೂರಿನ ಸೇವಕರಾದ ಡಾ.ಶಿವರಾಜ ಪಾಟೀಲಗೆ ಮನೆಗೆ ಕಳಿಸುವ ಕೆಲಸ ಆಗಲಿದೆ’ ಎಂದು ಹೇಳಿದರು.
‘ಕೊಡಗಿನಲ್ಲಿ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದು ಸರಿಯಲ್ಲ. ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಖಂಡನೀಯ. ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಿದೆ’ಎಂದರು.
‘ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳು ಧರ್ಮದ ಅಜೆಂಡಾದಲ್ಲಿ ರಾಜಕೀಯ ಮಾಡುತ್ತಿವೆ. ಇದು ಚುನಾವಣೆ ವರ್ಷ ಇರುವುದರಿಂದ ಇಂತಹ ಆಟಗಳನ್ನು ನಡೆಸಿದ್ದಾರೆ. ಇದನ್ನು ಜೆಡಿಎಸ್ ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ’ಎಂದುಹೇಳಿದರು.