ರಾಯಚೂರು: ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ನೀಡಬೇಕು ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿಯ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿ ನಗರದ ಭಂಗಿಕುಂಟಾ ಬಳಿಯ ರಾಜಕಾಲುವೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಸಫಾಯಿ ಕರ್ಮಚಾರಿ ಗೀತಾ ಸಿಂಗ್.
ಚರಂಡಿಗಿಳಿದು ಪ್ರತಿಭಟನೆ ಮೂಲಕ ನಗರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಜಿಲ್ಲಾಡಳಿತ ಹಾಗೂ ನಗರಸಭೆಯ ಆಡಳಿತದ ಗಮನಕ್ಕೆ ತಂದರೂ ಕೇವಲ ಭರವಸೆಯಲ್ಲಿಯೇ ಕಾಲ ದೂಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಲಾಗಿತ್ತು. ಇದೀಗ ಸ್ಮಶಾನ ಜಾಗಕ್ಕಾಗಿ ಚರಂಡಿಗೆ ಇಳಿದು ಪ್ರತಿಭಟನೆ ಶುರುಮಾಡಿದ್ದಾರೆ. ಮ್ಯಾನ್ಯುವಲ್ ಸ್ಕ್ಯಾವೆಂಜರ್ ಕಾರ್ಮಿಕರಿಗಾಗಿ ಸ್ಮಶಾನ ಸ್ಥಳಕ್ಕೆ ಬೇಡಿಕೆ ಇಡಲಾಗಿತ್ತು. ಇದರಂತೆ ನಗರಸಭೆ ಪೌರಾಯುಕ್ತರು, ಅಧಿಕಾರಿಗಳು ಸ್ಮಶಾನ ಸ್ಥಳ ಕೊಡುವ ಭರವಸೆಯನ್ನೂ ನೀಡಿದ್ದರು. ಆದರೆ ಐದಾರು ತಿಂಗಳು ಕಳೆದರೂ ಕೊಟ್ಟ ಮಾತು ಈಡೇರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ ಮತ್ತು ಅಸಮಾಧಾನವನ್ನು ಹೊರಹಾಕಿದ್ದಾರೆ.
ಪೊಲೀಸರ ಮುಂದೆಯೇ ಮೈ ಮೇಲೆ ಚರಂಡಿ ನೀರು ಹಾಕಿಕೊಂಡು ಪ್ರತಿಭಟನೆ ಮುಂದುವರೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಮಾರ್ಕೆಟ್ ಯಾರ್ಡ್ ಪೊಲೀಸರು ಆಗಮಿಸಿದ್ದು ಸಮಸ್ಯೆ ಆಲಿಸಿ, ಸಮಾಧಾನ ಪಡಿಸಿದ್ದಾರೆ.