ರಾಯಚೂರು: ಜನರಲ್ಲಿ ಸ್ವಚ್ಛತಾ ಪ್ರಜ್ಞೆ ಜಾಗೃತವಾದರೆ ಸ್ವಚ್ಛ ಭಾರತ ಮಿಷನ್ ಯೋಜನೆ ಯಶಸ್ವಿಗೊಂಡು ಸ್ವಚ್ಛ ಭಾರತ ನಿರ್ಮಾಣದ ಕನಸು ನನಸಾಗಲಿದೆ ಎಂದು ನಗರಸಭೆ ಸದಸ್ಯೆ ರೇಣುಕಾ ಭೀಮರಾಯ ಹೇಳಿದರು.
ನಗರದ ಸಿಯಾತಲಾಬ್ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಚೇರಿ ವಿಜಯಪುರ ಮತ್ತು ಧಾರವಾಡ, ಜಿಲ್ಲಾಡಳಿತ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಶನಿವಾರ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್ (ನಗರ) ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಂ.ಎಸ್.ನಟೇಶ ಮಾತನಾಡಿ, ಗ್ರಾಮೀಣ ಪ್ರದೇಶಕ್ಕಿಂತ ನಗರದಲ್ಲಿ ಹೆಚ್ಚಿನ ಅಶುಚಿತ್ವ ಕಾಣುತ್ತಿದ್ದು, ನಗರಸಭೆಯ ಸಿಬ್ಬಂದಿಯೊಂದಿಗೆ ಕೈ ಜೋಡಿಸಿ ನಗರವನ್ನು ಸ್ವಚ್ಛವಾಗಿಸಬೇಕು ಎಂದು ಹೇಳಿದರು.
ನಗರಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಇದು ಕೆರೆ ಹಾಗೂ ನದಿಗಳ ಮೂಲಕ ಸಮುದ್ರ ಸೇರಿ ಜಲಚರಗಳ ದೇಹಕ್ಕೆ ಹೋಗುತ್ತಿದೆ. ಇವುಗಳ ಸೇವನೆ ಮಾಡುವವರ ದೇಹಕ್ಕೆ ಇದು ಸೇರುವುದರಿಂದ ರೋಗಗಳಿಗೆ ಆಸ್ಪದ ನೀಡಿದಂತಾಗಿದೆ ಎಂದರು.
ಪ್ಲಾಸ್ಟಿಕ್ ಬಳಕೆಗೆ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹೇರಿಕೊಂಡು ಕಸ ಉತ್ಪತ್ತಿಯನ್ನು ಕಡಿಮೆಗೊಳಿಸಬೇಕು. ಕಸ ಹಾಗೂ ತ್ಯಾಜ್ಯ ಸಂಸ್ಕರಿಸಿ ಸ್ವಚ್ಛತಾ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಯೂಸುಫ್ ಖಾನ್ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯ ಸುತ್ತಮುತ್ತ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಪೋಷಕರಿಗೆ ನೆರವಾಗಬೇಕು ಎಂದು ತಿಳಿಸಿದರು.
ನಗರಸಭೆ ಪರಿಸರ ಎಂಜಿನಿಯರ್ ಜೈಪಾಲ ರೆಡ್ಡಿ ಪ್ರಾತ್ಯಕ್ಷಿಕೆ ಮೂಲಕ ಹಸಿ ಮತ್ತು ಒಣ ಕಸ ವಿಂಗಡಿಸುವುದನ್ನು ತೋರಿಸಿಕೊಟ್ಟರು. ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ವೀರನಗೌಡ, ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕರಾಮಗೌಡ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾ, ಮುಖ್ಯಗುರು ಮೋಯಿನುಲ್ ಹಕ್, ಸಿ.ಕೆ.ಸುರೇಶ, ಮುರಳಿಧರ್ ಕಾರಬಾರಿ, ವಿದ್ಯಾಸಾಗರ ಚಿಣಮಗೇರಿ, ಕೆ.ಇ.ಕುಮಾರ್, ಸೈಯಾದ್ ಶಂಶುದ್ದೀನ್, ಶ್ಯಾಮ್ ಸುಂದರ್, ಭೀಮರಾಯ ಇದ್ದರು.