ರಾಯಚೂರು: ಹಿಂದಿ ಭಾಷೆಯ ಜೊತೆಗೆ ಕನ್ನಡ ಭಾಷೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಹೇಳಿದರು.
ನಗರದ ಹಿಂದಿ ವರ್ಧಮಾನ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಕನ್ನಡ ಭಾಷೆ ಕಡಿಮೆಯಾಗುತ್ತಿದೆ. ರಾಷ್ಟ್ರೀಯ ಭಾಷೆಯಾಗಿರುವ ಹಿಂದಿ ದಕ್ಷಿಣ ಭಾರತದಲ್ಲಿ ಕೂಡ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದ್ದು, ಹಿಂದಿ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಬೇಕು ಎಂದರು.
ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಬಯಲು ಶೌಚಾಲಯ ಮುಕ್ತಗೊಳಿಸಬೇಕು ಎಂದು ತಿಳಿಸಿದರು.
ಯರಮರಸ್ನ ಡಯಟ್ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು, ನಿವೃತ್ತ ಶಿಕ್ಷಕ ಬಂಡೂರಾವ್ ಚಾಗಿ, ಅಜಯ ಸಿಂಗ್, ಹೀರಾಬಾಯಿ, ಸೈಯದ್ ಸಿರಾಜ್ ಹುಸೇನ್, ಮೊಯಿನುಲ್ ಹಕ್, ಅನಿಲ್, ಸುಜಾತ, ಚೇತನ್ ಇದ್ದರು.
ಹಿಂದಿ ಕಲಿಕೆಯಿಂದ ರಾಷ್ಟ್ರಪ್ರೇಮ
ರಾಯಚೂರು: ರಾಷ್ಟ್ರ ಭಾಷೆ ಹಿಂದಿ ಪ್ರತಿಯೊಬ್ಬರೂ ಕಲಿಯಬೇಕು. ಭಾಷೆಯ ಕಲಿಕೆಯಿಂದ ರಾಷ್ಟ್ರಪ್ರೇಮ ಬೆಳೆಯಲಿದೆ ಎಂದು ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್.ಹಿರೇಮಠ ಹೇಳಿದರು.
ತಾಲ್ಲೂಕಿನ ನೆಲಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಹರು ಯುವ ಕೇಂದ್ರ, ಭಾರತ ಸೇವಾದಳ ಹಾಗೂ ಇತರೆ ಸಂಘಟನೆಗಳಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಹಿಂದಿ ದಿವಸ್- ಹಿಂದಿ ಪಕವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಧ್ವಜ, ಭಾಷೆ, ಲಾಂಛನ ಹಾಗೂ ರಾಷ್ಟ್ರಗೀತೆಯ ಬಗ್ಗೆಯ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಮಾಡಿದ ಅನುಭವ ಹಂಚಿಕೊಂಡ ನರೇಂದ್ರ ಆರ್ಯ ಮಾತನಾಡಿ, ಹಿಂದಿ ಕಲಿಕೆಯಿಂದ ಐಕ್ಯತೆ ಬೆಳೆಯಲಿದೆ ಎಂದರು.
ಶಿಕ್ಷಕ ನೀಲಕಂಠ ಮಾತನಾಡಿ, ಮಾತೃಭಾಷೆಯೊಂದಿಗೆ ಹಿಂದಿಯೂ ಮಾತನಾಡಬೇಕು ಎಂದು ಹೇಳಿದರು.
ಭಾರತ ಸೇವಾದಳ ವಿಭಾಗ ಸಂಘಟಿಕ ವಿದ್ಯಾಸಾಗರ ಚಿಣಮಗೇರಿ, ಶಿಕ್ಷಕಿ ರೇಖಾ, ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಕೆ.ರಂಗನಾಥ ಮಾತನಾಡಿದರು.
ಇದೇವೇಳೆ ವರ್ಗಾವಣೆಗೊಂಡ ಶಿಕ್ಷಕ ಆಂಜನೇಯ ಅವರಿಗೆ ಬೀಳ್ಕೊಡಲಾಯಿತು. ಹಿಂದಿ ಭಾಷೆಯ ಬಗ್ಗೆ ವಸ್ತು ಪ್ರದರ್ಶನ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಶಿಕ್ಷಕರಾದ ಜ್ಯೋತಿ, ರಾಮಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಯುವ ಅಭಿವೃದ್ದಿ ಸಂಘದ ಕಾರ್ಯದರ್ಶಿ ತಿರುಮಲೇಶ ಇದ್ದರು. ಶಿಕ್ಷಕಿ ಸರ್ವಮಂಗಳ ಸ್ವಾಗತಿಸಿದರು. ವೈಜಯಂತಿ ಮಾಲಾ ವಂದಿಸಿದರು. ಗಂಗಾಬಾಯಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.