ರಾಯಚೂರು: ಜಿಲ್ಲೆಗೆ ಏಮ್ಸ್ ಸಂಸ್ಥೆ ಯನ್ನು ಮಂಜೂರು ಮಾಡಬೇಕು ಮತ್ತು ರಾಯಚೂರು ನೂತನ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ಘೋಷಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಪ್ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿ, ರಾಯಚೂರು ಜಿಲ್ಲೆಯು ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಹಿಂದುಳಿದಿದೆ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಹಿಂದೆ ರಾಜಕೀಯ ಇಚ್ಛಾಶಕ್ತಿ ಮತ್ತು ಬೇರೆಯವರ ಮೋಸದಿಂದ ಐಐಟಿ ಎಂಬ ಶಿಕ್ಷಣ ಸಂಸ್ಥೆಯು ಕೈ ತಪ್ಪಿದೆ. ಈಗ ಆ ಸರದಿಯಲ್ಲಿ ಏಮ್ಸ್ ಸೇರುವ ಸಾಧ್ಯತೆ ಹೆಚ್ಚಾಗುತ್ತಿದೆ. ಈ ಭಾಗದ ಜನತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಶಿಕ್ಷಣ ಲಭಿಸುತ್ತಿಲ್ಲ. ಆದ್ದರಿಂದ ಹೈದರಾಬಾದ್, ಬೆಂಗಳೂರು, ಚೆನೈ, ಪುಣೆ ಮತ್ತು ಬಾಂಬೆಯಂತಹ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಲಾಗಿದೆ.
ನಂಜುಡಪ್ಪ ವರದಿ ಸೇರಿ ಅನೇಕ ಅಧ್ಯಯನ ವರದಿಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕು ಅನ್ನುವ ಅಂಶವನ್ನು ತಿಳಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಸೇರಿ ಕೇಂದ್ರದ ತಂಡ ಸ್ಥಳ ಪರಿಶೀಲನೆ ಮಾಡಿ ಸಮಾಲೋಚನೆ ಮಾಡಿದೆ. ಏಮ್ಸ್ ಮಂಜೂರಾತಿಗಾಗಿ ಜಿಲ್ಲೆಯ ಜನಾಗ್ರಹವು ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಉಪಾಧ್ಯಕ್ಷ ಬಸವರಾಜ ದೀನಸಮುದ್ರ, ಮಹಾಲಿಂಗ ದೊಡ್ಡಮನಿ, ಗೌರಿ, ಬಸವಂತ ಮಸ್ಕಿ, ಮಹೇಶ್ವರಿ, ಮೌನೇಶ ಬುಳ್ಳಾಪುರ, ವೆಂಕಟೇಶ ಕವಿತಾಳ, ನಾಗಮೋಹನ ಸಿಂಗ್, ಅಮರೇಶ ಇದ್ದರು.