ಸಿಂಧನೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಲಾವಿದ ಪಂಡಿತ್ ದೇವೇಂದ್ರಕುಮಾರ ಮುಧೋಳ ಹೇಳಿದರು.
ತಾಲ್ಲೂಕಿನ ತಿಡಿಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ‘ಎಸ್ಸೆಸ್ಸೆಲ್ಸಿ ನಂತರ ಮುಂದೇನು?’ ವಿಚಾರ ಸಂಕೀರಣದಲ್ಲಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಮಹತ್ವ ಘಟ್ಟವಾಗಿದ್ದು, ಭವಿಷ್ಯದ ಗುರಿಗೆ ಇದು ಪ್ರಥಮ ಹಂತ. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಪರೀಕ್ಷೆಯಲ್ಲಿ ಪಡೆದ ಅಂಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದರೆ ಮುಂದಿನ ವ್ಯಾಸಂಗ ಸುಲಭವಾಗುತ್ತದೆ ಎಂದರು.
ಪಿಯುಸಿಯಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಿದ್ದು, ಇವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತಾನು ಈ ವಿಭಾಗವನ್ನು ಅಭ್ಯಾಸ ಮಾಡಿಯೇ ತೀರುತ್ತೇನೆ ಎಂಬ ಮಹತ್ವಾಕಾಂಕ್ಷೆಯನ್ನು ವಿದ್ಯಾರ್ಥಿಗಳು ಹೊಂದಬೇಕು. ಯಾವ ವಿಭಾಗವೇ ಆದರೂ ಎಲ್ಲವೂ ಉತ್ತಮ ಭವಿಷ್ಯವನ್ನೇ ರೂಪಿಸುತ್ತವೆ. ಆದರೆ ನಿರಂತರ ಅಧ್ಯಯನಶೀಲತೆ, ಕಠಿಣ ಪರಿಶ್ರಮ ಇರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಬೀರಪ್ಪ ಶಂಭೋಜಿ ಮಾತನಾಡಿ, ಗುರುಗಳ ಮಾರ್ಗದರ್ಶನ, ಪಾಲಕರ ಪ್ರೋತ್ಸಾಹದಿಂದ ಮುಂದಿನ ವ್ಯಾಸಂಗದ ಬಗ್ಗೆ ಸರಿಯಾದ ನಿರ್ಧಾರವನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು. ಆಸಕ್ತಿಗನುಗುಣವಾಗಿ ಆಯಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕು ರೂಪಿಸಿಕೊಳ್ಳಬೇಕು ಎಂದರು.