ರಾಯಚೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯು ಈ ಬಾರಿ ‘ಎ‘ ಗ್ರೇಡ್ ಪಟ್ಟಿಯಲ್ಲಿರುವುದು ಸಂತಸ ಮೂಡಿಸಿದೆ.
ಫಲಿತಾಂಶ ಪ್ರಮಾಣದಲ್ಲಿ ಪ್ರತಿಬಾರಿ ಕೊನೆಯ ಐದು ಜಿಲ್ಲೆಗಳಲ್ಲಿ ರಾಯಚೂರು ಕೂಡಾ ಒಂದಾಗಿರುತ್ತಿತ್ತು. ಈ ಸಲ ಯಾದಗಿರಿಗಿಂತಲೂ ಮುಂದಿದೆ. ಕಳೆದ ಎರಡು ವರ್ಷ ಕೋವಿಡ್ ಮಹಾಮಾರಿಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಡೆಸುವುದಕ್ಕೆ ಪರ್ಯಾಯ ಪದ್ಧತಿ ಅನುಸರಿಸಲಾಗಿತ್ತು. ಈ ಬಾರಿ ಮಾಮೂಲಿ ಪದ್ಧತಿಯಂತೆಯೇ ಪರೀಕ್ಷೆ ನಡೆಸಿದ್ದಲ್ಲದೆ, ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವುದಕ್ಕೆ ವಿಶೇಷ ಬೋಧನೆಯೊಂದಿಗೆ ಸಜ್ಜುಗೊಳಿಸಲಾಗಿತ್ತು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 31,885 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 24,658 (ಶೇ 77) ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶಾಸಕ ಪುತ್ರಿಗೆ ಪ್ರತಿಶತ ಅಂಕ: ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಪುತ್ರಿ ಸಾಕ್ಷಿ ಪಾಟೀಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಶತ 625 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ. ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿರುವ ಸಾಕ್ಷಿ, ಬೆಂಗಳೂರಿನ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ, ’ಫಲಿತಾಂಶ ಕಂಡು ಬಹಳ ಖುಷಿಯಾಗಿದೆ. ಆದರೆ, ನಾನು ಸಕ್ರಿಯ ರಾಜಕೀಯದಲ್ಲಿರುವ ಕಾರಣ ಮಗಳ ಜತೆ ಕಾಲ ಕಳೆಯಲು ಸಮಯ ಹೊಂದಾಣಿಕೆ ಇಲ್ಲದಾಗಿದೆ. ಮಗಳ ಸಾಧನೆಗೆ ನನ್ನ ಪತ್ನಿ ಶ್ರಮ ಸಾಕಷ್ಟಿದ್ದು, ಇಬ್ಬರಿಗೂ ಇದರ ಗರಿಮೆ ಸಲ್ಲಬೇಕು‘ ಎಂದರು.
ರಾಯಚೂರಿನ ಸಂಜನಾ ಸಾಧನೆ: ತಾಲ್ಲೂಕಿನ ಶಕ್ತಿನಗರ ಕೆಪಿಸಿಎಲ್ ಡಿಎವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನಾ ಮಲ್ಲಿಕಾರ್ಜುನ ಅವರು 624 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಇಂಗ್ಲಿಷ್ ಭಾಷಾ ವಿಷಯದಲ್ಲಿ 99 ಅಂಕಗಳು ಬಂದಿದ್ದು, ಇನ್ನುಳಿದ ವಿಷಯಗಳಲ್ಲಿ ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿ ಸಾಧನೆಯನ್ನು ಪಾಲಕರು ಹಾಗೂ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.