ರಾಯಚೂರು: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸೋಮಶೇಖರ್ ಯಾದಗಿರಿ ಅವರು ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ರೋಡ್ ಶೋ ನಡೆಸಿದರು.
ಭಗತ್ಸಿಂಗ್ ವೃತ್ತದಿಂದ ನೇತಾಜಿನಗರ, ಪಟೇಲ್ ರಸ್ತೆ, ಸಿಟಿ ಟಾಕೀಸ್, ಹರಿಹರ ರಸ್ತೆ, ಬಟ್ಟೆ ಬಜಾರ್, ತೀನ್ ಕಂದಿಲ್ ಮೂಲಕ ಜಾಕೀರ್ ಹುಸೇನ್ ವೃತ್ತದವರೆಗೆ ರೋಡ್ ಶೋ ನಡೆಸಿ, ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಕೆ.ಸೋಮಶೇಖರ ಮಾತನಾಡಿ, ಬೆಲೆ ಏರಿಕೆ ನಿಯಂತ್ರಿಸದ, ಉದ್ಯೊಗ ನೀಡದ ಜನ ವಿರೋಧಿ, ಭ್ರಷ್ಟ-ಕೋಮುವಾದಿ ಪಕ್ಷಗಳನ್ನು ಸೋಲಿಸಿ ಎಸ್ಯುಸಿಐ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಗಿರೀಶ್, ಶರಣಪ್ಪ ಉದ್ಬಾಳ್, ಚನ್ನಬಸವ ಜಾನೇಕಲ್, ಎಂ.ರಾಮಣ್ಣ, ಎನ್.ಎಸ್.ವೀರೆಶ್, ತಿರುಮಲರಾವ್, ಶಿವರಾಜ, ಪ್ರಮೋದ್ ಕುಮಾರ್ ಇದ್ದರು.
ರೋಡ್ ಶೋ ಮುಂಚಿತವಾಗಿ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ, ಮತಯಾಚನೆ ಮಾಡಲಾಯಿತು.