ಮಸ್ಕಿ (ರಾಯಚೂರು): 'ಸಾರಿಗೆ ನೌಕರರು ಹಕ್ಕುಗಳನ್ನು ಕೇಳಿದರೆ ಎಸ್ಮಾ ಜಾರಿ ಮಾಡುತ್ತೇವೆ ಎನ್ನುವುದು ನ್ಯಾಯವೇ' ಎಂದು ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಪ್ರಶ್ನಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿಯವರು ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಂದು ರೀತಿ ಸರ್ವಾಧಿಕಾರಿಯಾಗಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೊಂದು ರೀತಿಯ ಸರ್ವಾಧಿಕಾರಿ' ಎಂದು ಆರೋಪಿಸಿದರು.
'ಈ ಹಿಂದೆ ಸಾರಿಗೆ ನೌಕರರು ಮುಷ್ಕರ ಮಾಡಿದಾಗ, ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೆ ಹೇಳಿದ್ದರು. ಸದ್ಯಕ್ಕೆ ಈ ವಿಷಯವು ಮುಖ್ಯಮಂತ್ರಿ ಅವರ ಬಳಿ ಇದೆ. ಜನರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಅವರೇ ನಿರ್ಧಾರ ಕೈಗೊಳ್ಳಲಿ' ಎಂದರು.
'ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ಚರ್ಚಿಸಲು ಸರ್ವಪಕ್ಷಗಳ ಮುಖಂಡರನ್ನು ಕರೆದು ಮುಖ್ಯಮಂತ್ರಿ ಚರ್ಚಿಸಬೇಕು ಎನ್ನುವುದು ನಮ್ಮ ಸಲಹೆ' ಎಂದು ಹೇಳಿದರು.