ರಾಯಚೂರು: ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು 33 ತಿಂಗಳು ಕಳೆದರೂ ಕೇವಲ 6 ಸಾಮಾನ್ಯ ಸಭೆಗಳನ್ನು ನಡೆಸಿದ್ದು, ಪಂಚಾಯತ್ ರಾಜ್ ಕಾಯ್ದೆ 1993 ರ ಪ್ರಕಾರ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿರುವುದರಿಂದ ಕಾಯ್ದೆಯ ತಿದ್ದುಪಡಿ 268(2) ಅಡಿಯಲ್ಲಿ ಜಿಲ್ಲಾ ಪಂಚಾಯಿತಿಯನ್ನು ವಿಸರ್ಜನೆ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೇಜವಾಬ್ದಾರಿಯಿಂದ ಆಡಳಿತ ಸಂಪೂರ್ಣ ಕುಸಿತ ಕಂಡಿದ್ದು, ಅಭಿವೃದ್ಧಿ ಕಾರ್ಯಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿಗೆ ಅಧಿಕಾರದ ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸಿ ಸರ್ಕಾರದ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ. ಎರಡು ತಿಂಗಳಿಗೊಮ್ಮೆಯಾದರೂ ಸಾಮಾನ್ಯ ಸಭೆ ನಡೆಸಬೇಕು. ಅಧ್ಯಕ್ಷರು ಸಭೆ ಕರೆಯಲು ವಿಫಲರಾದರೆ ಉಪಾಧ್ಯಕ್ಷರು ಸಭೆ ಕರೆಯಬೇಕು ಅಥವಾ ಮೂರನೆಯ ಒಂದು ಭಾಗದಷ್ಟು ಸದಸ್ಯರ ಕೋರಿಕೆ ಮೇರೆಗೆ ಸಭೆ ಕರೆಯಬೇಕು. 13 ಮಾಸಿಕ ಕೆಡಿಪಿ ಸಭೆಗಳನ್ನು ಮಾತ್ರ ಮಾಡಲಾಗಿದೆ. ಸ್ಥಾಯಿ ಸಮಿತಿಗಳು ಕೂಡ ಕೇವಲ ನಾಲ್ಕು ಸಭೆಗಳನ್ನು ನಡೆಸಿವೆ ಎಂದು ದೂರಿದರು.
ಅಧ್ಯಕ್ಷರು ಕಾರ್ಯನಿರ್ವಹಿಸಲು ಅಸಮರ್ಥರಾದಾಗ ಉಪಾಧ್ಯಕ್ಷರು ಅಧ್ಯಕ್ಷರ ಅಧಿಕಾರ ಚಲಾಯಿಸಬೇಕು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸತತವಾಗಿ ಎರಡು ಸಭೆಗಳನ್ನು ಕರೆಯುವುದು ತಪ್ಪಿಸಿದರೆ ಸದಸ್ಯತ್ವದಿಂದ ಅನರ್ಹಗೊಳಿಸಬಹುದಾಗಿದೆ. ಸಾಮಾನ್ಯ ಸಭೆ ಎರಡು ತಿಂಗಳಿಗೊಮ್ಮ ನಡೆಯದಿದ್ದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷರ ಗಮನಕ್ಕೆ ತರಬೇಕು. ಆದಾಗ್ಯೂ ಸಭೆ ನಡೆಯದಿದ್ದಾಗ ಸರ್ಕಾರಕ್ಕೆ ವರದಿ ನೀಡಬೇಕು. ಆದರೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ಇಲ್ಲಿದಿದ್ದರೆ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಲಾಗುತ್ತದೆ ಎಂದರು.
ಅಶೋಕಕುಮಾರ ಜೈನ್, ಶಿವುಕುಮಾರ ಯಾದವ, ಶರಣಬಸಪ್ಪ ಅಚ್ಚೊಳ್ಳಿ, ವೆಂಕಟೇಶ ಯಾದವ, ಮಹ್ಮದ ರಫಿ ಇದ್ದರು.