ರಾಯಚೂರು: ಕೃಷಿ ಉತ್ಪನ್ನಗಳನ್ನು ಖರೀದಿಸಲು ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ 2018–19ನೇ ಸಾಲಿನ ಬೆಳೆವಿಮೆ ಪರಿಹಾರ ಹಣವನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ರೈತ ಸೌಹಾರ್ದ ಸಹಕಾರಿ ಸಂಘದ ಸದಸ್ಯರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಬರಗಾಲವಿದ್ದು, ಈ ಬಾರಿ ನೆರೆ ಹಾಗೂ ಬರ ಪರಿಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಪಸ್ವಲ್ಪ ಬೆಳೆ ಬೆಳೆದಿರುವ ರೈತರು ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೂ, ಕಡಿಮೆ ಬೆಲೆ ಮಾರುವಂತಹ ಪರಿಸ್ಥಿತಿಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನಗಳನ್ನು ಖರೀದಿಸಲು ಆದೇಶಿಸಿ, ರೈತರ ಬೆಳೆ ಬರುವ ಮುನ್ನವೇ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಸರ್ಕಾರದ ಆದೇಶದ ಬಗ್ಗೆಯೂ ರೈತರಿಗೆ ಸರಿಯಾಗಿ ಮಾಹಿತಿಯೂ ದೊರೆಯುವುದಿಲ್ಲ ಎಂದು ದೂರಿದರು.
ಖರೀದಿ ಕೇಂದ್ರದ ಪ್ರಕ್ರಿಯೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು. ಬೆಳೆ ವಿಮೆ ಹಣ ಪಾವತಿಯೂ ಸರಿಯಾಗಿ ಆಗಿಲ್ಲ. ಮಾಹಿತಿಯೂ ನೀಡುತ್ತಿಲ್ಲ ವಿಳಂಬ ಮಾಡದೇ ರೈತರಿಗೆ ಪರಿಹಾರ ಹಣ ದೊರಕಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಶಿವರಾಮರೆಡ್ಡಿ, ರಾಘವೇಂದ್ರ, ಮಹೇಶ, ಖಾಜಾ, ಸಣ್ಣ ಬುಗ್ಗಪ್ಪ, ವೆಂಕಟೇಶ, ಹನುಮಂತ, ಮಾರಮ್ಮ, ಯಲ್ಲಮ್ಮ, ಭೀಮಣ್ಣ, ಜಿಂದಮ್ಮ, ಕಮಲಮ್ಮ ಇದ್ದರು.