ರಾಯಚೂರು:ಜೀತಪದ್ದತಿ, ಬಿಟ್ಟಿ ಚಾಕರಿ ಮಾಡುವುದು ಸಾಮಾಜಿಕ ಅನಿಷ್ಠ ಪದ್ದತಿಯಾಗಿದ್ದು, ಇದರಲ್ಲಿ ತೊಡಗಿದವರು ತಮಗೆ ತಾವೇ ಮಾಡಿಕೊಂಡಿರುವ ಅನ್ಯಾಯ. ಇದರಿಂದ ಹೊರಬರಬೇಕು. ಇದರ ನಿರ್ಮೂಲನೆಗೆ ಹೋರಾಟ ಅನಿವಾರ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಕಿರಣ ಕಮಲ್ ಪ್ರಸಾದ್ ಹೇಳಿದರು.
ನಗರದ ಸ್ಪಂದನ ಭವನದಲ್ಲಿ ಮಂಗಳವಾರ ಜೀತ ವಿಮುಕ್ತ ಕರ್ನಾಟಕ (ಜೀವಿಕ) ಜಿಲ್ಲಾ ಸಮಿತಿಯಿಂದ ಹಮ್ಮಿಕೊಳ್ಳಲಾದ ಬಿಟ್ಟಿ ಚಾಕರಿ ಬಗ್ಗೆ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಆಸ್ತಿಯನ್ನು ಸಮಾನ ಹಂಚಿಕೆ ಹಕ್ಕಿನ ಬಗ್ಗೆ ಕಾನೂನು ರೂಪಿಸಲು ಸೂಚಿಸಿದ್ದರು. ಆದರೆ ಅಂದು ಕೆಲವರು ವಿರೋಧ ಮಾಡಿದ್ದರಿಂದ ಕಾಯ್ದೆಯಾಗಿಲ್ಲ. ಉಳ್ಳವರು ಮೇಲ್ಜಾತಿಯವರು ಕೆಳಜಾತಿಯವರಿಗೆ ಬಿಟ್ಟಿ ಚಾಕರಿ ಹಾಗೂ ಜೀತ ಪದ್ದತಿಗೊಳಪಡಿಸಿದ್ದಾರೆ ಎಂದರು.
ತಲೆ ತಲಾಂತರಗಳಿಂದ ಬಿಟ್ಟಿ ಚಾಕರಿ ಹಾಗೂ ಜೀತ ಪದ್ದತಿ ಜಾರಿಯಲ್ಲಿದ್ದು ಮಾನವನಿಗೆ ಜಾತಿ ಆಧಾರದ ಮೇಲೆ ಕನಿಷ್ಠ ಸೌಲಭ್ಯ ನೀಡಿ ಶೊಷಣೆಗೊಳಪಡಿಸಲಾಗುತ್ತಿದೆ. ಅಮಾನವೀಯ, ಜೀತಪದ್ದತಿಯನ್ನು ಕಾನೂನು ಅಡಿ ನಿಷೇಧಿಸಿದ್ದರೂ ಕೂಡ ಆಧುನಿಕ ಯುಗದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಜೀತಪದ್ದತಿ ಹಾಗೂ ಬಿಟ್ಟಿ ಚಾಕರಿಯಿಂದ ಶೊಷಣೆಗೊಳಗಾಗಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಅಭಿವೃದ್ಧಿಯಾಗಬೇಕು. ಆದರೆ,ಇಂದಿಗೂ ಶೋಷಿತ ಸಮುದಾಯಗಳು ಬಿಟ್ಟಿ ಚಾಕರಿಗೆ ಒಳಗಾಗಿ ಸ್ವಾತಂತ್ರ್ಯ ಜೀವನ ಮಾಡಲಿಕ್ಕೆ ಆಗುತ್ತಿಲ್ಲ ಎನ್ನುವುದು ದುರ್ದೈವದ ಸಂಗತಿ ಎಂದು ಹೇಳಿದರು.
ಸರ್ಕಾರ ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ತಿಳಿಯದ ಕಾರಣ ಉಳ್ಳವರ ಪಾಲಾಗುತ್ತಿದೆ. ಅದನ್ನು ಪಡೆಯಲು ಮುಂದಾಗಬೆಕು.ಜೀತಪದ್ದತಿ ವಿರುದ್ಧ ಕಾನೂನುಗಳಿದ್ದರೂ ಸಂತ್ರಸ್ಥರಿಗೆ ಸದುಪಯೋಗ ಆಗುತ್ತಿಲ್ಲ. ಜೀತ ಇಟ್ಟುಕೊಂಡವರಿಗೆ ಪರಿಹಾರ ನೀಡಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಬೇಕು. ಕಾನೂನಿನಲ್ಲಿದೆ ಜೀತ ಎನ್ನುವುದಕ್ಕೆ ದಾಖಲೆ ಬೇಕಿಲ್ಲ. ಹೇಳಿಕೆಗಳೇ ದಾಖಲೆಗಳು,ಈ ನಿಟ್ಟಿನಲ್ಲಿ ಕಾನೂನು ತಿಳಿದುಕೊಂಡು ಸೌಲಭ್ಯ ಪಡೆಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜೀವಿಕ ಉತ್ತರ ಕರ್ನಾಟಕ ಉಸ್ತುವಾರಿ ಹಾಗೂ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಜೀತ ಪದ್ದತಿ ಕಾನೂನು ಪ್ರಕಾರ ನಿಷೇಧಿಸಲಾಗಿದ್ದು ಇದರ ವಿರುದ್ಧ ಸಂಘಟನಾತ್ಮಕ ಧ್ವನಿ ಏಳಬೇಕಿದೆ. ಅಂದಾಗ ಮಾತ್ರ ಜೀತ ಪದ್ದತಿ ನಿರ್ಮೂಲನೆ ಸಾಧ್ಯ ಎಂದರು.
ಜೀವಿಕ ಸಂಸ್ಥೆಯ ಉಸ್ತುವಾರಿ ಸಂಚಾಲಕ ಚೆನ್ನರಾಯಪ್ಪ, ಮಹಿಳಾ ಸಂಚಾಲಕಿ ಅಮರಾವತಿ, ರಾಮಾಂಜಿನೇಯ, ಅಲ್ಲಮಪ್ರಭು, ಮರಿಸ್ವಾಮಿ, ಪ್ರಕಾಶ, ರಾಜಪ್ಪ, ಗಂಗಪ್ಪ, ಹುಲಿಗೆಪ್ಪ, ಲೋಕಪ್ಪ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.