ರಾಯಚೂರು: ಈಗಿನ ಸ್ಥಿತಿಯಲ್ಲಿ ಅಭಿವೃದ್ಧಿಪರ ಪತ್ರಿಕೋದ್ಯಮ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಹೇಳಿದರು.
ಭಾನುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಮಹಾನಂದ ಸಂಪಾದಕತ್ವದ ಸ್ಟಾರ್ ಆಫ್ ರಾಯಚೂರು ಎನ್ನುವ ಕನ್ನಡ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಬರೆಯುವುದು ಅವಶ್ಯವಾಗಿದೆ. ಇದರಿಂದ ತಾವೂ ಸಹಿತ ಅಭಿವೃದ್ಧಿ ಕಾರ್ಯ ಮಾಡಬಹುದು ಎನ್ನುವ ಪ್ರೇರಣೆ ಇತರರಿಗೆ ದೊರೆಯಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್ ಆಫ್ ರಾಯಚೂರು ಪತ್ರಿಕೆ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸಲಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವೆಂಕಟಸಿಂಗ್ ಮಾತನಾಡಿ, ಪತ್ರಿಕೆಗಳನ್ನು ಆರಂಭಿಸುವುದು ಸುಲಭ. ಆದರೆ, ನಡೆಸಿಕೊಂಡು ಹೋಗುವುದು ಬಹಳ ಕಷ್ಟ. ಸ್ಟಾರ್ ಆಫ್ ರಾಯಚೂರು ಪತ್ರಿಕೆ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ರಾಯಚೂರು ಗ್ರಾಮೀಣ ಸಿಪಿಐ ರಮೇಶ ಮೇಟಿ, ಸ್ಪಿಲ್ ಪತ್ರಿಕೋದ್ಯಮ ಕಾಲೇಜಿನ ಪ್ರಾಚಾರ್ಯ ಅಯ್ಯಪ್ಪ ತುಕ್ಕಾಯಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿದರು. ಬಿಜೆಪಿ ಮುಖಂಡ ಜಂಬಣ್ಣ ನಿಲೋಗಲ್ ವೇದಿಕೆ ಮೇಲಿದ್ದರು. ಸಂಪಾದಕ ಮಹಾನಂದ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ವೆಂಕಟೇಶ ಹೂಗಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ನವಲಿ ಪ್ರಾರ್ಥಿಸಿದರು.