ಲಿಂಗಸುಗೂರು: ತಾಲ್ಲೂಕಿನಾದ್ಯಂತ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ದಾರರಿಗೆ ಸಮರ್ಪಕವಾಗಿ ಪಡಿತರ ಆಹಾರ ಧಾನ್ಯ ವಿತರಣೆ ಆಗುತ್ತಿಲ್ಲ ಎಂದು ಆರೋಪಿಸಿ ಗುರುವಾರ ಲಿಂಗಸುಗೂರಿಗೆ ಭೇಟಿ ನೀಡಿದ್ದ ಆಹಾರ ಇಲಾಖೆ ಉಪ ನಿರ್ದೇಶಕ ಕೆ.ಡಿ. ಗುರುರಾಜ ಅವರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಡಿತರ ಕಾರ್ಡ್ ನೆಪದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಹಂಚಿಕೆ ಮಾಡುತ್ತಿಲ್ಲ. ಆಹಾರ ಧಾನ್ಯ ಸಂಗ್ರಹಣಾ ಗೋದಾಮಿನಿಂದ ನೇರವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ತಾಲ್ಲೂಕು ಅಧಿಕಾರಿಗಳ ಗಮನ ಸೆಳೆದರು ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ಪಡಿತರ ಸಮಪರ್ಕವಾಗಿ ನೀಡುತ್ತಿಲ್ಲ ಎಂದು ಹಲ್ಕಾವಟಗಿ, ಬಂಡೆಭಾವಿ, ಹೂವಿನಭಾವಿ, ಬುದ್ದಿನ್ನಿ, ತೆರೆಭಾವಿ, ಗುಡಿಹಾಳ, ಮಾವಿನಭಾವಿ, ಲಿಂಗಸುಗೂರು, ಮುದಗಲ್ಲು ಸೇರಿದಂತೆ ಸುತ್ತಮುತ್ತಲ ಜನತೆ ಹಲವು ಬಾರಿ ಲಾರಿ ಸಮೇತ ತಹಸೀಲಾ್ದರ್ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದೇವೆ. ಪಡಿತರ ಕಾರ್ಡ್ ನೀಡಲು ರೂ. 500 ರಿಂದ 2000 ಲಂಚ ಪಡೆಯುವ ಬಗ್ಗೆ ಲಿಖಿತ ದೂರು ನೀಡಿದರು ಸ್ಪಂದಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಒಂದೆರಡು ದಿನ ಮಾತ್ರ ತೆರೆದಿರುತ್ತವೆ. ಉಳಿದಂತೆ ಸದಾ ಮುಚ್ಚಿಕೊಂಡು ಹೋದ ಪಡಿತರದಾರರಿಗೆ ಅಕ್ಕಿ, ಗೋದಿ ಬಂದಿಲ್ಲ ಎಂದು ಉತ್ತರಿಸುತ್ತಾರೆ. ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಮನಸೋ ಇಚ್ಛೆ ಪಡಿತರ ಹಂಚಿಕೆ ಮಾಡುತ್ತಿರುವ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪರಿಶೀಲಿಸಿ ಕ್ರಮ: ಆರೇಳು ತಿಂಗಳಿಂದ ಪಡಿತರಕ್ಕಾಗಿ ತಾಲ್ಲೂಕಿನಲ್ಲಿ ಇಷ್ಟೊಂದು ಪ್ರತಿಭಟನೆಗಳು ನಡೆದಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಯಾವೊಬ್ಬ ಅಧಿಕಾರಿಗಳು ಕೂಡ ಮಾಹಿತಿ ನೀಡಿಲ್ಲ. ಈ ಕುರಿತಂತೆ ಪಡಿತರ ಹಂಚಿಕೆಯಲ್ಲಿ ಹಾಗೂ ಪಡಿತರ ಕಾರ್ಡ್ ನೀಡುವಲ್ಲಿ ನಡೆಯುತ್ತಿದೆ ಎನ್ನಲಾಗುವ ಭ್ರಷಾ್ಟಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಉಪ ನಿರ್ದೇಶಕ ಕೆ.ಡಿ. ಗುರುರಾಜ ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ಟಿ. ಯೋಗೇಶ. ಆಹಾರ ಶಿರಸ್ತೇದಾರ ಕೆ.ಬಿ. ಕುಲಕರ್ಣಿ ಉಪಸ್ಥಿತರಿದ್ದರು. ಮುತ್ತಿಗೆ ನೇತೃತ್ವವನ್ನು ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ಮುಖಂಡರಾದ ಬಸನಗೌಡ ಚಿತ್ತಾಪೂರ, ಪ್ರಭುಲಿಂಗ ಮೇಗಳಮನಿ, ಯಂಕಪ್ಪ ಮತ್ತಿತರರು ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.