ಲಿಂಗಸುಗೂರು: ಬೇಸಿಗೆಯಿಂದ ಅಂತರ್ಜಲ ಕುಸಿದಿದ್ದು, ಬಿತ್ತನೆ ಮಾಡಿದ ಶೇಂಗಾ ಬೆಳೆ ಒಣಗುತ್ತಿದೆ. ರೈತರು ಸಂಕಷ್ಟಕ್ಕೆ ಸಿಲಕುವಂತಾಗಿದೆ. ಸರ್ಕಾರ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ, ಸಂತೆಕೆಲ್ಲೂರು, ಮಟ್ಟೂರು ಮುದಗಲ್, ಆಶಿಹಾಳ, ಜಾಂತಾಪುರ, ಚಿಕ್ಕಹೆಸರೂರು, ಹೊನ್ನಳ್ಳಿ, ಗುರುಗುಂಟಾ, ಗುಂತಗೋಳ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಜಮೀನುಗಳಲ್ಲಿ ಶೇಂಗಾ ಹೂ ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿ ನೀರಿನ ಅಭಾವದಿಂದ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ಬರದ ವಾಸ್ತವ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಬೇಕು. ಕಂದಾಯ ಅಧಿಕಾರಿಗಳು ಸಮಗ್ರ ವರದಿ ಆಧರಿಸಿ ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ನೀಡಲು ಸರ್ಕಾರದ ಗಮನ ಸೆಳೆಯಬೇಕು. ಬೇಸಿಗೆಯಲ್ಲಿ ನಿರಂತರ ವಿದ್ಯುತ್ ನೀಡಲು ಜೆಸ್ಕಾಂ ಅಧಿಕಾರಿಗಗಳಿಗೆ ಸೂಚಿಸುವಂತೆ ಮನವಿ ಮಾಡಿದರು.
ಕಳೆದ ಮೂರು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿದ್ದು, ಬರಗಾಲದ ಕರಿನೆರಳಿಗೆ ತತ್ತರಿಸಿದ ಎಲ್ಲ ರೈತರಿಗೆ ಬೆಳೆನಷ್ಟ ಪರಿಹಾರ ಸಮರ್ಪಕ ತಲುಪಿಲ್ಲ. ಬಾಕಿ ಉಳಿದ ಎಲ್ಲ ರೈತರ ಬೆಳೆನಷ್ಟ ಪರಿಹಾರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ. ಮುಖಂಡರಾದ ಹನುಮವ್ವ , ಶರಣಪ್ಪ, ಹನುಮಪ್ಪ, ಗ್ಯಾನಪ್ಪ, ಬಾಲಪ್ಪ, ಮಲ್ಲಪ್ಪ, ಗ್ಯಾನಪ್ಪ, ಅಂಬಮ್ಮ, ಲಕ್ಷ್ಮವ್ವ, ಮುದಕಪ್ಪ, ಅಬ್ದುಲ್ಸಾಬ, ಹನುಮಪ್ಪ, ದೇವಪ್ಪ, ಹೊಳಿಯಪ್ಪ, ಹಾಜಿಬಾಬು ಸೇರಿದಂತೆ ಆಶಿಹಾಳ, ಮುದಗಲ್, ಮ್ಯಾಗಳಪೇಟೆ, ಜಾಂತಾಪುರ, ಕನ್ನಾಪುರಹಟ್ಟಿ ಗ್ರಾಮಸ್ಥರು ಭಾಗವಹಿಸಿದ್ದರು.