ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಗೆ `ಗಂಗಾ ಕಲ್ಯಾಣ ಯೋಜನೆ~ ಸಮರ್ಪಕ ರೀತಿಯಲ್ಲಿ ತಲುಪಿಸುವಲ್ಲಿ ಹಾಗೂ ಈ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ದಶಕದಿಂದ ಸಾಕಷ್ಟು ಹಿನ್ನೆಡೆಯಾಗಿದೆ.
ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ಲೋಪ ಪತ್ತೆ ಮಾಡಿ ಅಂಥವರನ್ನು ಅಮಾನತು ಮಾಡಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಂಧೀಖಾನೆ ಖಾತೆ ಸಚಿವ ಎ ನಾರಾಯಣಸ್ವಾಮಿ ಹೇಳಿದರು.
ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗಂಗಾ ಕಲ್ಯಾಣ ಯೋಜನೆಯು ಅರ್ಹ ಫಲಾನುಭವಿ ಗುರುತಿಸುವಲ್ಲಿ, ಫಲಾನುಭವಿ ಗುರುತಿಸ್ಪಟ್ಟರೂ ಯೋಜನೆ ಸೌಲಭ್ಯ ದೊರಕಿಲ್ಲ. ಇಂಧನ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸಾಕಷ್ಟು ನಿರ್ಲಕ್ಷ್ಯವಹಿಸಲಾಗಿದೆ. ತಮ್ಮ ನಮ್ಮ ಇಲಾಖೆಯ ಅಧಿಕಾರಿಗಳದ್ದೇ ಇರಲಿ. ಜೆಸ್ಕಾಂ ಅಧಿಕಾರಳದ್ದೇ ಇರಲಿ ಅಂಥವರ ವಿರುದ್ಧ ಕ್ರಮ ಖಂಡಿತ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸೂಪರ್ಸೀಡ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಶೇ 22.7ರಷ್ಟು ಅನುದಾನ ದೊರಕುತ್ತದೆ. ಈ ಅನುದಾನ ಬಳಕೆ ಮಾಡದೇ ಇದ್ದರೆ ಅಂಥ ನಗರಸಭೆಗಳನ್ನು ಸೂಪರ್ಸೀಡ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಸ್ಸಿಎಸ್ಟಿ ಜನರ ಅನುಕೂಲಕ್ಕಾಗಿಯೇ ರಾಜ್ಯದ ನಗರಸಭೆ ಮತ್ತು ಪುರಸಭೆಗಳಿಗೆ ಶೇ 22.7ರಷ್ಟು ಅನುದಾನ ದೊರಕಿಸಲಾಗುತ್ತದೆ. ಕ್ರಿಯಾ ಯೋಜನೆ ಸಿದ್ಧಪಡಿಸಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ. ರಾಯಚೂರು ನಗರಸಭೆ ಈ ಶೇ 22.7ರಷ್ಟು ಅನುದಾನ ಬಳಕೆ ಮಾಡಿಲ್ಲ ಎಂಬ ದೂರು ಕೇಳಿ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು. ವರದಿಯಲ್ಲಿ ಸತ್ಯಾಂಶವಿದ್ದರೆ ನಗರಸಭೆ ಸೂಪರ್ಸಿಡ್ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ತಿಳಿಸಿದರು.
ಉನ್ನತ ಅಧಿಕಾರಿಗಳ ತಂಡ ಭೇಟಿ: ಅಪೌಷ್ಟಿಕತೆ ಹಾಗೂ ವಿವಿಧ ಕಾಯಿಲೆಯಿಂದ ದೇವದುರ್ಗ ಮತ್ತು ರಾಯಚೂರು ತಾಲ್ಲೂಕಿನಲ್ಲಿ ಮಕ್ಕಳು ನರಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡವು ಶೀಘ್ರ ಈ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
ಮೊಬೈಲ್ ಹೆಲ್ತ್ ಯುನಿಟ್: ಗರ್ಭಿಣಿ ಮಹಿಳೆಯರು ಅಶಕ್ತತೆ ಹಾಗೂ ಹಿಮೊಗ್ಲೋಬಿನ್ ಕೊರತೆ ಸೇರಿದಂತೆ ಹಲವು ರೀತಿ ಅನಾರೋಗ್ಯದಿಂದ ಬಳಲುತ್ತಿರುವುದು ವರದಿಯಾಗಿದೆ. ಈ ಸಮಸ್ಯೆ ಹೋಗಲಾಡಿಸಲು ಪ್ರತಿ ತಾಲ್ಲೂಕಿಗೆ ಎರಡು `ಸಂಚಾರಿ ಆರೋಗ್ಯ ಸೇವಾ ಘಟಕ~ (ಮೊಬೈಲ್ ಹೆಲ್ತ್ ಯುನಿಟ್)~ ಆರಂಭಿಸಲು ನಿರ್ಧರಿಸಲಾಗಿದೆ. ಪ್ರಥಮ ಹಂತದಲ್ಲಿ ರಾಯಚೂರು ಜಿಲ್ಲೆ ಸೇರಿದಂತೆ ಈ ಭಾಗದ ಏಳು ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.
ಅದೇ ರೀತಿ ಪ್ರತಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗಕ್ಕೆ ದೊರಕುವ ಅನುದಾನ, ಗ್ರಾಮೀಣ ಅಭಿವೃದ್ಧಿ ಅನುದಾನ, ಸ್ಥಳೀಯ ಸಂಸ್ಥೆಗಳಾದ ಗ್ರಾಪಂ, ತಾಪಂ, ನಗರಸಭೆ, ಪುರಸಭೆಯಂಥ ಸಂಸ್ಥೆಗಳ ಅನುದಾನದಲ್ಲಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣ ಮಾಡಬೇಕು. ಈ ಶೌಚಾಲಯ ನಿರ್ಮಾಣ ಯೋಜನೆ ಕಾರ್ಯವೂ ಏಳು ಜಿಲ್ಲೆಯಲ್ಲಿ ಯುದ್ಧೋಪಾದಿಯಲ್ಲಿ ಆಗಬೇಕು ಎಂದು ಇಲಾಖೆ ಆದೇಶಿಸಿದೆ ಎಂದು ಹೇಳಿದರು.
ಅಗ್ನಿ ಪರೀಕ್ಷೆ: ಈ ಹಿಂದೆ ರಾಜ್ಯದಲ್ಲಿ ಆಡಳಿತ ಮಾಡಿದ ಸರ್ಕಾರದಲ್ಲಿ ಲಕ್ಷಾಂತರ ಎಕರೆ ಭೂಮಿ ಡಿ ನೋಟಿಫಿಕೇಶನ್ ಆಗಿದೆ. ಇದು ರಾಜಕೀಯ ಷಡ್ಯಂತ್ರ. ಈಗ ಯಡಿಯೂರಪ್ಪ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಕಾನೂನಿಗೆ ಗೌರವ ತೋರುವ ಅವರು ಎದುರಾಗಿರುವ ಸಮಸ್ಯೆಯಿಂದ ಹೊರ ಬರಲಿದ್ದಾರೆ. ಹಗರಣ, ಭ್ರಷ್ಟಾಚಾರದ ಆರೋಪಗಳು ಕೇಂದ್ರ ಸರ್ಕಾರವನ್ನೂ ಬಿಟ್ಟಿಲ್ಲ. ಪ್ರಧಾನಮಂತ್ರಿ ಮನಮೋಹನ್ಸಿಂಗ್ ಅವರೂ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.