ರಾಯಚೂರು: ತಮ್ಮ ಗ್ರಾಮದಲ್ಲಿ ಜನ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಹಳಷ್ಟು ಜನರಿಗೆ ಜ್ವರ ಬಂದು ಆಸ್ಪತ್ರೆ ಸೇರುತ್ತಿದ್ದಾರೆ. ಈ ರೀತಿ ಜ್ವರದಿಂದ ನರಳುತ್ತಿರುವವರು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ ಡೆಂಗೆ ಜ್ವರ ಎಂದು ಹೇಳುತ್ತಿದ್ದು, ಆತಂಕ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಎಂದು ಯರಮರಸ್ ದಂಡ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸುಮಾರು 20ಕ್ಕೂ ಹೆಚ್ಚಿನ ಜನ ಡೆಂಗೆ ಜ್ವರದಿಂದ ನರಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಸಾಮಾನ್ಯ ಜ್ವರ ಎಂದು ಹೇಳುತ್ತಾರೆ. ಜ್ವರ ಕಡಿಮೆ ಆಗದೇ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿದಾಗ ಡೆಂಗೆ ಜ್ವರ ಎಂದು ಹೇಳಲಾಗುತ್ತಿದೆ. ಇದಕ್ಕೆ ವೈದ್ಯಕೀಯ ತಪಾಸಣೆ ದಾಖಲೆಗಳೂ ಇವೆ. ಈ ಬಗ್ಗೆ ಪರಿಶೀಲನೆ ಮಾಡಬೇಕು. ಜ್ವರದಿಂದ ಬಳಲುತ್ತಿರುವ ತಮ್ಮ ಗ್ರಾಮದ ಜನತೆಯ ಆರೋಗ್ಯ ಸಂರಕ್ಷಣೆಗೆ ತುರ್ತು ಕ್ರಮಗಳನ್ನು ಈಗಲೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ವೈದ್ಯಕೀಯ ವೆಚ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ನಿಗಾವಹಿಸಿ ವೈದ್ಯಕೀಯ ತಪಾಸಣೆಗೆ ಸಕಲ ಸೌಕರ್ಯ ಕಲ್ಪಿಸಿದರೆ ತಮ್ಮಂಥ ಗ್ರಾಮಸ್ಥರ ಅನಾರೋಗ್ಯ ಸಮಸ್ಯೆ ಪರಿಹಾರಕ್ಕೆ ಸಹಕಾರಿಯಾಗಲಿದೆ ಎಂದು ಗ್ರಾಮದ ನಾಗಲಿಂಗಸ್ವಾಮಿ, ಗಂಗಪ್ಪ, ಲಕ್ಷ್ಮಣ, ತಿಪ್ಪಣ್ಣ, ಆಂಜನೇಯ, ವೆಂಕಟೇಶ ಹಾಗೂ ಇತರರು ಮನವಿ ಮಾಡಿದರು.