ರಾಯಚೂರು: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳ ಅನಿರ್ದಿಷ್ಟಾವಧಿ ಧರಣಿ ಸೋಮವಾರಕ್ಕೆ 7ನೇ ದಿನ ಪೂರೈಸಿದ್ದು, ಪ್ರತಿಭಟನಾಕಾರರು ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೌಕರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗ್ರಾಮ ಪಂಚಾಯಿತಿಗಳಲ್ಲಿ ಹತ್ತು ವರ್ಷಗಳಿಂದ ಸುಮಾರು 180ಕ್ಕೂ ಅಧಿಕ ನೌಕರರು ಕೆಲಸ ನಿರ್ವಹಿಸುತ್ತಿದ್ದು, ವೇತನ ಪಾವತಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ ಎಂದು ದೂರಿದರು.
ನರೇಗಾ ಯೋಜನೆಯಡಿ ಬಾಕಿಯಿರುವ ವೇತನವನ್ನು ಕಾರ್ಮಿಕ ಅಧಿಸೂಚನೆಯಂತೆ ಪಾವತಿಸಬೇಕು. ಕಾರ್ಮಿಕ ಇಲಾಖೆಯ ಸಚಿವಾಲಯದ ಅಧಿಸೂಚನೆಯಂತೆ ಹೊಸ ವೇತನ ಜಾರಿ ಮಾಡಬೇಕು. ಬಾಕಿ ಉಳಿದಿರುವ ಆಪರೇಟರ್ಗಳ ಅನುಮೋದನೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಆದೇಶದಂತೆ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ವೇತನ ನೀಡಬೇಕು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿದೆ. ಬೇರೆ ಪಂಚಾಯಿತಿಗಳಿಗೆ ನಿಯೋಜಿಸಲು ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಎಚ್.ಕೆ.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಬಾಕಿ ವೇತನ ಪಾವತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ವೇತನ ಪಾವತಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕ ಅಧ್ಯಕ್ಷ ಭೀಮರೆಡ್ಡಿ ಪೊಲೀಸ್ ಪಾಟೀಲ, ಮುರಳಿ ಮೋಹನ, ನಾಗರಾಜ ನಾಯಕ, ರಮೇಶ, ಪಾಂಡುರಂಗ, ಸೋಮಶೇಖರ, ರಂಗನಾಥ, ಬಸವರಾಜ ಸ್ವಾಮಿ, ಅಮರೇಶ, ರಾಯಪ್ಪ, ಜಿಂದಮ್ಮ ಸೇರಿದಂತೆ ಆಪರೇಟರ್ಗಳು ಭಾಗವಹಿಸಿದ್ದರು.