ಯಲಬುರ್ಗಾ: ತಾಲ್ಲೂಕಿನ ಬಂಡಿ ಗ್ರಾಮದ ಸಂಪರ್ಕ (ಯಲಬುರ್ಗಾ-ಬಂಡಿ)ರಸ್ತೆ ಮಧ್ಯೆದಲ್ಲಿ ಎರಡು ಮೂರು ಕಡೆ ಕಾಣಿಸಿಕೊಂಡಿರುವ ತಗ್ಗು ದಿನ್ನೆಗಳು ಭಾರಿ ಅಪಾಯವನ್ನು ಆಹ್ವಾನಿಸುವಂತಿದೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವುಗಳ ದುರಸ್ತಿಗೆ ಮುಂದಾಗಬೇಕು ಎಂದು ಬಂಡಿ, ತುಮ್ಮರಗುಂದಿ ಹಾಗೂ ಯಲಬುರ್ಗಾ ನಾಗರಿಕರು ಆಗ್ರಹಿಸಿದ್ದಾರೆ.
ಸದ್ರಿ ರಸ್ತೆಯ ಕೆಲವು ಕಡೆ ರಸ್ತೆ ಉತ್ತಮವಾಗಿದ್ದು, ಮತ್ತೆ ಕೆಲವು ಕಡೆ ಸಂಪೂರ್ಣ ಹದೆಗೆಟ್ಟಿದೆ.
ಸಾಕಷ್ಟು ಪ್ರಮಾಣದಲ್ಲಿ ಗ್ರಾನೈಟ್ ಕಲ್ಲುಸಾಗಣೆ ವಾಹನಗಳು ಇದೇ ಮಾರ್ಗವಾಗಿ ಹಾದು ಹೋಗುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಮೇಲಾಗಿ ಮೂರ್ನಾಲ್ಕು ಕಡೆಗಳಲ್ಲಿ ಭಾರಿ ಗಾತ್ರದ ತಗ್ಗುಗಳಿದ್ದು ಆಗಾಗ ವಾಹನ ಸಂಚಾರರಿಗೆ ಅಪಾಯ ತಂದೊಡ್ಡಿವೆ.
ಅದರಲ್ಲೂ ತಗ್ಗು ಪ್ರದೇಶದಲ್ಲಿರುವ ಈ ದುರಾವಸ್ಥೆಯು ರಾತ್ರಿ ಸಮಯದಲ್ಲಿ ಸುಲಭವಾಗಿ ಕಣ್ಣಿಗೆ ಗೋಚರಿಸದೇ ಇರುವ ಕಾರಣ ವಾಹನಗಳು ಮುಗ್ಗಿರಿಸಿ ಬಿದ್ದು ಸವಾರರು ಆಸ್ಪತ್ರೆ ಸೇರಿದ ಉದಾಹರಣೆಗಳು ಸಾಕಷ್ಟಿವೆ.
ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಇನ್ನೂವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಹೆಸರಿಗೆ ಮಾತ್ರ ಸದಸ್ಯರಾದಂತಿರುವುದರಿಂದ ಈ ಭಾಗದ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರಿಲ್ಲದಂತಾಗಿದೆ ಎಂದು ಬಂಡಿ ಗ್ರಾಮದ ಶರಣಬಸವರಾಜ ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದಿಂದ ಬಂಡಿ ವೃತ್ತದ ವರೆಗೆ ರಸ್ತೆ ಸುಧಾರಣೆಗಾಗಿ ವರ್ಷದಲ್ಲಿ ಮೂರ್ನಾಲ್ಕು ಸಲ ಅನುದಾನ ಬಿಡುಗಡೆಯಾಗಿದೆ. ಅಲ್ಲದೇ ದುರಸ್ತಿ ಕಾರ್ಯ ನಡೆದಿದೆಯಾದರೂ ತಿಂಗಳೊಳಗೆ ಕಿತ್ತುಹೋಗಿದೆ.
ಹೀಗೆ ಕಾಟಾಚಾರದಲ್ಲಿ ಕಳಪೆಯಾಗಿ ನಿರ್ಮಿಸಿದ್ದರ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗುತ್ತಿದೆ. ಸದ್ರಿ ರಸ್ತೆಯ ದುರಸ್ತಿಗೊಳಿಸುವಂತೆ ಆಗಾಗ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿದ್ದರೂ ಎಚ್ಚರಗೊಳ್ಳದೇ ಇರುವುದರಿಂದ ಮುಂದಿನ ದಿನಗಳಲ್ಲಿ ದುರಸ್ತಿಗೆ ಆಗ್ರಹಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.
ಹೆಚ್ಚಿನ ಆಪಾಯಗಳು ಆಗುವ ಮುನ್ನ ಸಂಬಂಧಪಟ್ಟವರು ಹಾಳಾದ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಳಕಪ್ಪ ಹೂಗಾರ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.