ಲಿಂಗಸುಗೂರು: ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಈಚೆಗೆ ಆಯೋಜಿಸಿದ್ದ ಜನಸ್ಪಂದನ ಸಭೆ ಆರಂಭಗೊಳ್ಳುತ್ತಿದ್ದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಜನರು ಇಲಾಖೆಗಳಲ್ಲಿ ನ ಯೋಜನೆಗಳ ವಿವರಣೆ ನೀಡುವಂತೆ ಒತ್ತಾಯಿಸಿದರು.
ಈಚನಾಳ ಗ್ರಾಮದಲ್ಲಿ ಸಮಸ್ಯೆಗಳಿವೆ. ಹಳೆಯ ಓವರ್ಹೆಡ್ ಟ್ಯಾಂಕ್ ಕುಸಿಯುವ ಹಂತದಲ್ಲಿದೆ. ಹೊಸ ಟ್ಯಾಂಕ್ಗೆ ನೀರು ತುಂಬಿಸಲು ಆಗುತ್ತಿಲ್ಲ. ಗ್ರಾಮದ ವಾರ್ಡ್ಗಳು ಗಬ್ಬೆದ್ದು ನಾರುತ್ತಿವೆ ಎಂದು ಸಮಸ್ಯೆಗಳ ಪಟ್ಟಿಯನ್ನೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಬಿಚ್ಚಿಟ್ಟರು.
ಸರ್ಕಾರ ಘೋಷಣೆ ಮಾಡಿದ ಯಾವುದೇ ಯೋಜನೆಗಳು ಸಮರ್ಪಕವಾಗಿ ಗ್ರಾಮೀಣ ಪ್ರದೇಶಗಳಿಗೆ ಬಂದಿಲ್ಲ. ಪ್ರತಿಯೊಂದು ಇಲಾಖೆ ಅಧಿಕಾರಿಗಳು ಹಾಜರಿದ್ದು ಮನೆ ಮನೆಗೆ ತೆರೆಳಿ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಮಾಹಿತಿ ನೀಡದೇ, ಏಕಾಏಕಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳುತ್ತಿರುವುದನ್ನು ಖಾಜಾವಲಿ ಮತ್ತು ಪಿಡ್ಡನಗೌಡ ವಿರೋಧಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಕರಡಕಲ್ಲ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಉಪಾ-ಧ್ಯಕ್ಷ ಮಾನಪ್ಪ ಚವ್ಹಾಣ ಸೇರಿದಂತೆ ಚುನಾಯಿತ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.