ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ತೋಟದ ಮನೆಯ ಬೀಗ ಮುರಿದು ರೇಷ್ಮೆಗೂಡನ್ನು ಕಳವು ಮಾಡಲಾಗಿದೆ.
ಗ್ರಾಮದ ರೈತ ಮೂರ್ತಿ ಅವರು ರೇಷ್ಮೆಗೂಡು ಬೆಳೆದು ಮಂಗಳವಾರ ಮಾರುಕಟ್ಟೆಗೆ ಸಾಗಿಸಲು ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು ಎಂದು ತಿಳಿದುಬಂದಿದೆ. ಸುಮಾರು 100 ಕೆ.ಜಿ.ಯಷ್ಟಿದ್ದ ಅವನ್ನು ಸೋಮವಾರ ರಾತ್ರಿ ಕಳವು ಮಾಡಲಾಗಿದೆ. ಘಟನೆಯಲ್ಲಿ ₹30 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕಳವು ಮಾಡಲು ಬಂದಿರುವ ಕಳ್ಳರ ಪರ್ಸ್ ಸ್ಥಳದಲ್ಲಿ ಸಿಕ್ಕಿದ್ದು, ಅದರಲ್ಲಿದ್ದ ಭಾವಚಿತ್ರಗಳು ಹಾಗೂ ವಿಳಾಸದ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.