ಕುದೂರು: ಸೂರಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಾಯಾದಿಗಳ ಕಲಹಕ್ಕೆ ಸುಮಾರು 17 ವರ್ಷಗಳ ಹಿಂದೆ ಬೆಳೆಯಲಾಗಿದ್ದ 30 ಮಾವಿನ ಮರಗಳು ಬಲಿಯಾಗಿವೆ.
ಸೂರಪ್ಪನಹಳ್ಳಿ ಗ್ರಾಮದ ಎರಡು ಎಕರೆ ಜಮೀನನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡು ಅಣ್ಣ, ತಮ್ಮಂದಿರು ತಲಾ ಒಂದೊಂದು ಎಕರೆ ತೆಗೆದುಕೊಂಡಿದ್ದಾರೆ.
‘ಶುಕ್ರವಾರ ಬೆಳಗ್ಗೆ ನಮ್ಮ ಜಮೀನಿಗೆ ನುಗ್ಗಿ ಸುಮಾರು 17 ವರ್ಷದ 30 ಮಾವಿನ ಮರಗಳನ್ನು ಯಂತ್ರದ ಮೂಲಕ ಬುಡ ಸಮೇತ ಕಿತ್ತು ಹಾಕಲಾಗಿದೆ’ ಎಂದು ರೇಣುಕಮ್ಮ ಎಂಬ ಮಹಿಳೆ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಾಯಾದಿಗಳಾದ ನಂಜೇಗೌಡ, ರಂಗಮ್ಮ, ಚಾಮರಾಜಮ್ಮ, ನಾಗಮ್ಮ, ರಾಮಚಂದ್ರ ಎಂಬುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಕೋರಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.