ರಾಮನಗರ: ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಬಳಿ ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿನಲ್ಲಿ ಶನಿವಾರ ಮುಂಜಾನೆ ನರಭಕ್ಷಕ ಚಿರತೆ ಸೆರೆಯಾಯಿತು. ಇದೇ ತಿಂಗಳ 18ರಂದು ಗ್ರಾಮಕ್ಕೆ ಸಮೀಪದ ಗುಡ್ಡದಲ್ಲಿ ದನ ಮೇಯಿಸುತ್ತಿದ್ದ ಪುಟ್ಟಹುಲಿಗೆಮ್ಮ ಎಂಬ ಮಹಿಳೆಯ ಮೇಲೆ ಚಿರತೆಯು ದಾಳಿ ನಡೆಸಿ ಕೊಂದು ಹಾಕಿತ್ತು.
ನಂತರದಲ್ಲಿಯೂ ಇದೇ ಭಾಗದಲ್ಲಿ ಓಡಾಡಿಕೊಂಡಿತ್ತು. ಸೆರೆ ಹಿಡಿಯಲು ಬೋನು ಇಡಲಾಗಿತ್ತು. ಸುಮಾರು ಆರು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಸದ್ಯ ಆರೋಗ್ಯದಿಂದ ಇದೆ.
ಕಾಡಿಗೆ ಬಿಟ್ಟಲ್ಲಿ ಮತ್ತೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಪ್ರಾಣಿ ಸಂಗ್ರಹಾಲಯಕ್ಕೆ ನೀಡುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಸೆರೆಯಾದ ಚಿರತೆಯನ್ನು ನೋಡಲು ನೂರಾರು ಗ್ರಾಮಸ್ಥರು ಸೇರಿದ್ದರು.