ಚನ್ನಪಟ್ಟಣ: ‘ಅಂಬೇಡ್ಕರ್ ಅವರು ಸಂವಿಧಾನದ ಮುಖಾಂತರ ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸಿದ ಮಹಾನ್ ನಾಯಕ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಮಚಂದ್ರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜೆ. ಬ್ಯಾಡರಹಳ್ಳಿಯಲ್ಲಿ ಬಿಜೆಪಿ ಘಟಕದಿಂದ ಬುಧವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪ್ರಪಂಚವೇ ಶ್ಲಾಘಿಸುವ ಸಂವಿಧಾನವಿದ್ದರೆ ಅದು ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ. ಸಂವಿಧಾನದಲ್ಲಿ ಪ್ರತಿಯೊಂದು ಸಮು ದಾಯಕ್ಕೂ ಮೀಸಲಾತಿ ಕಲ್ಪಿಸಲಾಗಿದೆ. ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಲು ಮುಂದಾಗಬೇಕು ಎಂದರು.
ಕೋಡಂಬಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೆ.ಎಸ್. ನಾಗರಾಜು ಮಾತನಾಡಿ, ಅಂಬೇಡ್ಕರ್ ಆಶಯಗಳು ಈಡೇರುತ್ತಿಲ್ಲ. ಸಂವಿಧಾನದಲ್ಲಿರುವ ಮೂಲ ಆಶಯಗಳನ್ನು ಜಾರಿಗೆ ತರಲು ಸರ್ಕಾರಗಳು ಮುಂದಾಗಬೇಕು. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಸರ್ವ ಸಮುದಾಯದ ನಾಯಕ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಂಗಾಡಹಳ್ಳಿ ಜೈಪ್ರಕಾಶ್, ಮಾಳಗಾಳು ರಾಮು, ದೊಡ್ಡರಾಜು, ಬಸವರಾಜು, ಕೃಷ್ಣ ಹಾಜರಿದ್ದರು.