ಚನ್ನಪಟ್ಟಣ: ಕಲೆ ಎನ್ನುವುದು ಜೀವನದ ಕೈಗನ್ನಡಿ ಇದ್ದಂತೆ ಎಂದು ಹಿರಿಯ ಮುಖಂಡ ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೊಡ್ಡಮಳೂರಿನ ಗ್ರಾಮದಲ್ಲಿ ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ ಅವರ 138 ನೇ ಜಯಂತಿ, ಜಾನಪದ ಕಾರ್ಯಕ್ರಮ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆ ಮತ್ತು ಸಾಹಿತ್ಯ ಎರಡು ಪ್ರಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವು ಸಾಂಸ್ಕೃತಿಕ ಲೋಕದ ಮಿನುಗುವ ನಕ್ಷತ್ರಗಳಿದ್ದಂತೆ. ಕಲೆ ಬಿಟ್ಟು ಸಾಹಿತ್ಯವಿಲ್ಲ, ಸಾಹಿತ್ಯ ಬಿಟ್ಟು ಕಲೆ ಇಲ್ಲ ಎಂದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿವನ ಸಮುದ್ರ ವಿದ್ಯುತ್ ಕೇಂದ್ರ ಹಾಗೂ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡ ಸಾಹಿತ್ಯ ಷರಿಷತ್ತು ಸ್ಥಾಪನೆ ಮಾಡಿದ ಕೀರ್ತಿ ಅವರದ್ದು. ಸಮಾಜದ ಎಲ್ಲ ರಂಗಗಳಿಗೂ ಕೊಡುಗೆ ನೀಡಿರುವ ಇಂತಹ ಮಹನೀಯರನ್ನು ನೆನಪಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ ಕೆಲಸ’ ಎಂದರು.
ರೈತಸಂಘದ ಮುಖಂಡ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ, ಕಾರ್ಯದರ್ಶಿ ಎಂ.ಜೆ. ಮಂಗಳ, ಕಲಾವಿದ ಚಂದ್ರಾಜು ಹಾಜರಿದ್ದರು.
ಜನಪದ ಗಾಯಕ ಚೌ.ಪು.ಸ್ವಾಮಿ ಅವರಿಗೆ ‘ಕರುನಾಡ ಜಾನಪದ ಕೋಗಿಲೆ’, ಕಲಾವಿದರಾದ ಪೂರಿಗಾಲಿ ಮಹಾದೇವು ಅವರಿಗೆ ‘ಜಾನಪದ ರತ್ನ’ ಪ್ರಶಸ್ತಿ, ಕಲ್ಲಾಪುರ ಯೋಗೇಶ್ ಅವರಿಗೆ ‘ಜಾನಪದ ಕೋಗಿಲೆ’ ಪ್ರಶಸ್ತಿ ನೀಡಲಾಯಿತು.