ಮಾಗಡಿ: ಹಾಲು ಉತ್ಪಾದಕರ ಸಂಘದ ಸದಸ್ಯರೊಬ್ಬರು ಕ್ಷುಲ್ಲಕ ಕಾರಣಕ್ಕೆ ಸಂಘದ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ಖಂಡಿಸಿ ಮಂಗಳವಾರಸೋಲೂರು ಹೋಬಳಿ ಕನ್ನಸಂದ್ರದಲ್ಲಿ ಸದಸ್ಯರು ಹಾಲು ಹಾಕದೆ ಪ್ರತಿಭಟಿಸಿದರು.
ಸಂಘದ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಸರಿಯಾಗಿ ಮುದ್ರಿಸಿಲ್ಲ ಎಂಬಕಾರಣಕ್ಕೆ ಸದಸ್ಯ ಮಂಜುನಾಥ್ ಎಂಬುವರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಸತೀಶ್ ಕೆ.ಎಸ್.ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದು, ಬಲಗಣ್ಣಿಗೆ ಹಾನಿಯಾಗಿದೆ.
ಕಾರ್ಯದರ್ಶಿಯ ಮೇಲಿನ ಹಲ್ಲೆ ಖಂಡಿಸಿದ ಸಂಘದ ಸದಸ್ಯರು ಮಂಗಳವಾರ, ಡೇರಿಗೆ ಹಾಲು ಹಾಕದೆ ಪ್ರತಿಭಟನೆ ನಡೆಸಿದರು. ಅಲ್ಲದೆ, ಈ ಕೃತ್ಯವೆಸಗಿದ ಮಂಜುನಾಥ್ನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ‘ನಿತ್ಯ ನಮ್ಮ ಸಂಘದಲ್ಲಿ 750 ಲೀಟರ್ ಹಾಲು ಸಂಗ್ರಹವಾಗುತ್ತಿದೆ. 25 ವರ್ಷಗಳಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್ ನಿಯಮಾವಳಿಯಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮಂಜುನಾಥ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿರುವುದು ನಮಗೆಲ್ಲರಿಗೂ ನೋವುಂಟು ಮಾಡಿದೆ’ ಎಂದರು.
ಸಂಘದ ನಿರ್ದೇಶಕ ಪ್ರಸಾದ್ ಮಾತನಾಡಿ, ಸಂಘದ ಕಾರ್ಯದರ್ಶಿ ಮೇಲಿನ ಹಲ್ಲೆಗೆ ನ್ಯಾಯಕ್ಕಾಗಿ ಆಗ್ರಹಿಸಿ 52 ಜನ ಸದಸ್ಯರು ಹಾಲು ಹಾಕದೆ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷೆ ಸುಜಾತಮ್ಮ, ನಿರ್ದೇಶಕರಾದ ಪರಮಶಿವಯ್ಯ, ಹೊನ್ನಮ್ಮ, ಜಯಶೀಲಮ್ಮ, ಕೋಮಲ, ರೇಣುಕಯ್ಯ ಎಸ್, ಬೆಟ್ಟಯ್ಯ, ರೇಣುಕಪ್ಪ, ಮಾಜಿ ಉಪಾಧ್ಯಕ್ಷರಾದ ರೇಣುಕಯ್ಯ, ಹನುಮಂತಯ್ಯ ಹಾಗೂ ಸದಸ್ಯರೆಲ್ಲರೂ ಪ್ರತಿಭಟನೆ ನಡೆಸಿದರು.